ದುರ್ಬಲ ಸಮುದಾಯಗಳನ್ನು ಸಶಕ್ತಗೊಳಿಸಲು ಹಾಗೂ ಸಮಾನತೆ ಸಾಧಿಸುವ ಸಲುವಾಗಿ ನಮ್ಮಲ್ಲಿ ಮೀಸಲಾತಿ ಸೌಲಭ್ಯವನ್ನು ಒದಗಿಸಲಾಗಿದೆ. ಆದರೆ ಕೆಲವು ಪಟ್ಟಭದ್ರರು, ಜಾತಿಗೆ ಸಂಬಂಧಿಸಿದಂತೆ ಸುಳ್ಳು ಪ್ರಮಾಣ ಪತ್ರದ ಮೂಲಕ ಈ ಸವಲತ್ತನ್ನು ಕಬಳಿಸುತ್ತಿರುವುದಾಗಿ ಸಮಾಜ ಕಲ್ಯಾಣ ಸಚಿವರು ಅಲವತ್ತುಕೊಂಡಿರುವುದು ನಾಗರಿಕ ಸಮಾಜದಲ್ಲಿರುವ ಕೊಳಕು ಮನಸ್ಥಿತಿಯನ್ನು ಬಯಲು ಮಾಡಿದೆ.
ಹಿಂದುಳಿದ, ಅತಿಹಿಂದುಳಿದ ಹಾಗೂ ಪರಿಶಿಷ್ಟರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಬದ್ಧತೆ ಸರ್ಕಾರಕ್ಕೆ ಇದ್ದರೆ, ನಕಲಿ ಜಾತಿ ಪತ್ರಗಳ ಹಾವಳಿ ತಡೆಯಲು ಗಂಭೀರವಾಗಿ ಚಿಂತಿಸಬೇಕು. ಆದಾಯ ಪ್ರಮಾಣ ಪತ್ರವನ್ನು ಪ್ರತಿ ಐದು ವರ್ಷಕ್ಕೆ ಒಮ್ಮೆ ನವೀಕರಿಸಬಹುದು. ಜಾತಿಗೆ ಸಂಬಂಧಿಸಿದ ಪ್ರಮಾಣ ಪತ್ರಕ್ಕೆ ಒಂದು ವಿಶಿಷ್ಟ ಗುರುತು ಕೊಟ್ಟು ಆ ಮೂಲಕ 25 ವರ್ಷಗಳ ಅವಧಿಗೆ ಅನ್ವಯವಾಗುವಂತೆ ಅದನ್ನು ನೀಡಿದರೆ ಮೀಸಲಾತಿ ದುರುಪಯೋಗವನ್ನು ತಡೆಗಟ್ಟಬಹುದು. ಪರಿಷ್ಕರಣೆಗೂ ಅವಕಾಶ ಕಲ್ಪಿಸಬೇಕು.
ವಿಶಿಷ್ಟ ಗುರುತಿನ ಕಾಯಂ ಜಾತಿ ಪ್ರಮಾಣ ಪತ್ರ ಪಡೆಯುವ ಕುಟುಂಬವು ಭಾರತದ ಯಾವುದೇ ನಗರ, ಪಟ್ಟಣ, ಗ್ರಾಮಕ್ಕೆ ವಲಸೆ ಹೋದರೂ ಅವರಿಗೆ ಸೌಲಭ್ಯ ದೊರೆಯು-ವಂತಾಗಬೇಕು. ಪ್ರತಿ ಐದು ವರ್ಷಕ್ಕೆ ಅನ್ವಯ-ವಾಗುವಂತೆ ಆದಾಯ ಪತ್ರ, 25 ವರ್ಷದ ಅವಧಿಗೆ ಜಾತಿ ಪ್ರಮಾಣ ಪತ್ರ ನೀಡುವುದರಿಂದ, ಸಾರ್ವಜನಿಕರು ನಾಡಕಚೇರಿ, ತಾಲ್ಲೂಕು ಕಚೇರಿಗೆ ಅಲೆಯುವುದು ಕೂಡ ತಪ್ಪುತ್ತದೆ.