ಬಿಹಾರದ ಮುಖ್ಯಮಂತ್ರಿ ಜೀತನ್ ರಾಂ ಮಾಂಝಿ ಅವರು ಮಧುಬನಿ ಜಿಲ್ಲೆಯ ದೇವಾಲಯವೊಂದಕ್ಕೆ ಭೇಟಿ ನೀಡಿ ಪ್ರಾರ್ಥನೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಾಪಸಾದ ನಂತರ, ಸಂಪ್ರದಾಯವಾದಿಗಳು ಕೆಲವರು ದೇವಸ್ಥಾನದ ಆವರಣವನ್ನು ಮತ್ತು ವಿಗ್ರಹಗಳನ್ನು ಸ್ವಚ್ಛಗೊಳಿಸಿರುವುದು ವರದಿಯಾಗಿದೆ (ಪ್ರ.ವಾ., ಸೆ.30)
ಜೀತನ್ರಾಂ ಅವರು ದಲಿತರಲ್ಲೇ ಅತ್ಯಂತ ಹಿಂದುಳಿದ ಮಹಾದಲಿತ ವರ್ಗಕ್ಕೆ ಸೇರಿರುವುದೇ ಇದಕ್ಕೆ ಕಾರಣ. ಗಾಂಧಿ ಜಯಂತಿ ಅಂಗವಾಗಿ ಅಕ್ಟೋಬರ್ 2ರಂದು ಕೇಂದ್ರ ಸರ್ಕಾರ, ರಾಷ್ಟ್ರವ್ಯಾಪಿ ‘ಸ್ವಚ್ಛ ಭಾರತ ಅಭಿ ಯಾನ’ಕ್ಕೆ ಸಜ್ಜಾಗಿರುವ ಈ ಸಂದರ್ಭದಲ್ಲಿ, ಬಿಹಾರದ ಮುಖ್ಯಮಂತ್ರಿಯವರಿಗೆ ಆಗಿರುವ ಅವಮಾನ ನಾಚಿಕೆಗೇಡು. ದಲಿತರೆಂಬ ಕಾರಣಕ್ಕೆ ಮುಖ್ಯಮಂತ್ರಿಯವರನ್ನೇ ಈ ರೀತಿ ಅಸ್ಪೃಶ್ಯರೆಂಬಂತೆ ಕಂಡಿರುವುದು ಅತ್ಯಂತ ನೋವಿನ ಸಂಗತಿ.
ಅಸ್ಪೃಶ್ಯತೆ, ಸಾಂವಿಧಾನಿಕವಾಗಿ ಶಿಕ್ಷಾರ್ಹ ಅಪರಾಧ. ಆದರೂ ಅದು ಯಾವುದೇ ಎಗ್ಗಿಲ್ಲದೆ ಮುಂದುವರಿದಿದೆ. ಮನಸ್ಸಿನಲ್ಲಿ ತುಂಬಿರುವ ಜಾತೀಯತೆಯ ಮಹಾಕೊಳೆ ಶುದ್ಧೀಕರಣವಾಗದೆ ಸಮಾನತೆಯನ್ನು ಆಧರಿಸಿದ ಸ್ವಸ್ಥ ಭಾರತದ ನಿರ್ಮಾಣ ಸಾಧ್ಯವಿಲ್ಲ.