ನವದೆಹಲಿ, ಪಣಜಿ (ಪಿಟಿಐ): ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವುದಕ್ಕಾಗಿ ತೆಹೆಲ್ಕಾ ಸಂಪಾದಕ ತರುಣ್ ತೇಜ್ಪಾಲ್ ಅವರಿಗೆ ಸುಪ್ರೀಂಕೋರ್ಟ್ ಸೋಮವಾರ ಮೂರು ವಾರಗಳ ಕಾಲ ಮಧ್ಯಾಂತರ ಜಾಮೀನು ನೀಡಿದರೂ, ಅಂತಿಮ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ.
ಜಾಮೀನು ಲಭಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಗಿದ್ದರಿಂದ ತೇಜ್ಪಾಲ್ ಅವರಿಗೆ ಗೋವಾದಲ್ಲಿ ನಡೆದ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ತೇಜ್ಪಾಲ್ ಅವರು ಐದು ತಿಂಗಳಿನಿಂದ ಪಣಜಿಯಿಂದ 40 ಕಿ.ಮೀ ದೂರದಲ್ಲಿರುವ ಸಡಾ ಸಬ್ ಜೈಲ್ನಲ್ಲಿ ಬಂಧನದಲ್ಲಿದ್ದಾರೆ. ತೇಜ್ಪಾಲ್ ತಾಯಿ ಶಕುಂತಲಾ ತೇಜ್ಪಾಲ್ (87) ಅವರು ಶನಿವಾರ ಗೋವಾದಲ್ಲಿ ನಿಧನ ಹೊಂದಿದ್ದರು.
ತೇಜ್ಪಾಲ್ ತಾಯಿಯ ಅಂತ್ಯಕ್ರಿಯೆ ಸೋಮವಾರ ಸಂಜೆ ನಡೆಯಲಿದ್ದು, ಅದರಲ್ಲಿ ಭಾಗವಹಿಸಲು ತಮ್ಮ ಕಕ್ಷಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಅವರ ಪರ ವಕೀಲ ಸಂದೀಪ್ ಕಪೂರ್ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದರು.
ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಬಿ.ಎಸ್. ಚೌಹಾಣ್ ಮತ್ತು ಎ.ಕೆ. ಸಿಕ್ರಿ, ತೇಜ್ಪಾಲ್ ಅವರನ್ನೊಳಗೊಂಡ ನ್ಯಾಯಪೀಠ ಮೂರು ವಾರಗಳ ಕಾಲ ಮಧ್ಯಾಂತರ ಜಾಮೀನು ನೀಡಿ ಆದೇಶ ಹೊರಡಿಸಿತ್ತು.ಈ ವಿಷಯವನ್ನು ಸೋಮವಾರ ಬೆಳಿಗ್ಗೆ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತಾದರೂ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಮತ್ತು ವಿಚಾರಣೆಗೆ ನಿಗದಿ ಪಡಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನಂತರ ಅರ್ಜಿಯ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ಹೇಳಿತ್ತು.
ಸೋಮವಾರ ಮಧ್ಯಾಹ್ನ ಕೊಠಡಿಯಲ್ಲಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಪೀಠ, ಮಧ್ಯಾಂತರ ಜಾಮೀನು ನೀಡಿ ಆದೇಶ ಹೊರಡಿಸಿತ್ತು.
ಜಾಮೀನು ಪ್ರಕ್ರಿಯೆ ಎಲ್ಲಾ ಮುಗಿದ ನಂತರ ಗೋವಾಕ್ಕೆ ಪ್ರಯಾಣ ಬೆಳೆಸಿದ್ದ ತೇಜ್ಪಾಲ್ ಸಂಜೆ 7.15ಕ್ಕೆ ರುದ್ರಭೂಮಿಗೆ ತಲುಪಿದರಾದರೂ, ಅವರ ಸಹೋದರ ಮಿಂಟಿ ತೇಜ್ಪಾಲ್ ತಾಯಿ ಚಿತೆಗೆ ಸಂಜೆ 6 ಗಂಟೆಗೇ ಅಗ್ನಿಸ್ಪರ್ಶ ಮಾಡಿದ್ದರು.
ಅಂತ್ಯಕ್ರಿಯೆ ನಡೆಯುತ್ತಿರುವ ವೇಳೆ ತೇಜ್ಪಾಲ್, ಜೈಲಿನಲ್ಲಿ ಜಾಮೀನು ಪಡೆಯುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದರು ಎಂದು ಮೂಲಗಳು ಹೇಳಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.