ನವದೆಹಲಿ (ಪಿಟಿಐ): ‘ಅನುಷ್ಠಾನಗೊಳಿಸಲಾಗದ ಯೋಜನೆಗಳನ್ನು ರೂಪಿಸಬೇಡಿ’ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಖಡಕ್ ನಿರ್ದೇಶನ ನೀಡಿತು. ಪರಿಶಿಷ್ಟ ಜಾತಿ/ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ಗಳನ್ನು ಒದಗಿಸುವ ‘ಬಾಬು ಜಗಜೀವನ ರಾಮ್ ಛತ್ರವಾಸ್ ಯೋಜನೆ’ ಜಾರಿಗೆ ಕೇಂದ್ರ ನಿಧಾನಗತಿ ನೀತಿ ಅನುಸರಿಸಿರುವುದಕ್ಕೆ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಮಾಧ್ಯಮಿಕ ಶಾಲೆಗಳು, ಪ್ರೌಢಶಾಲೆಗಳು, ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಅಭ್ಯಸಿಸುತ್ತಿರುವ ಪರಿಶಿಷ್ಟ ಜಾತಿ/ಪಂಗಡಗಳ ಬಾಲಕ ಮತ್ತು ಬಾಲಕಿಯರಿಗೆ ವಸತಿ ಸೌಲಭ್ಯ ಕಲ್ಪಿಸುವುದು ಯೋಜನೆಯ ಧ್ಯೇಯೋದ್ದೇಶ.
ಆದರೆ ದೇಶದಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿನ ಹಾಸ್ಟೆಲ್ಗಳಲ್ಲಿ ಭಾರಿ ಅವ್ಯವಸ್ಥೆಗಳಿರುವ ಬಗ್ಗೆ ನ್ಯಾಯಮೂರ್ತಿಗಳಾದ ಮದನ್ ಬಿ ಲೋಕುರ್ ಮತ್ತು ಯು.ಯು. ಲಲಿತ್ ಅವರನ್ನೊಳಗೊಂಡ ಸಾಮಾಜಿಕ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಬಹುತೇಕ ಹಾಸ್ಟೆಲ್ಗಳಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸುವುದಕ್ಕೂ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದೂ ಪೀಠ ಟೀಕಿಸಿತು.
ಈ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರವನ್ನೇ ಹೊಣೆಯನ್ನಾಗಿಸಿದ ಪೀಠ, ತಕ್ಷಣ ಈ ಯೋಜನೆಯಡಿ ನಿರ್ಮಿಸಿದ ಹಾಸ್ಟೆಲ್ಗಳ ಪರಿಸ್ಥಿತಿ ಕುರಿತು ಸಮೀಕ್ಷೆ ನಡೆಸಿ, ನಾಲ್ಕು ತಿಂಗಳೊಳಗೆ ವರದಿ ಸಲ್ಲಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆದೇಶಿಸಿತು. ಅಲ್ಲದೆ, ಈ ಯೋಜನೆಯಡಿ ಹೊಸ ಹಾಸ್ಟೆಲ್ಗಳ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಪೀಠ, ಮುಂದಿನ ವಿಚಾರಣೆಯನ್ನು ಜುಲೈ 20ಕ್ಕೆ ಮುಂದೂಡಿತು.
ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್. ನರಸಿಂಹ ಅವರು, ಈ ವಿಷಯದಲ್ಲಿ ಕೇಂದ್ರದ ಪಾತ್ರ ತುಂಬಾ ಸೀಮಿತವಿದ್ದು, ನಿರ್ವಹಣೆಯ ಹೊಣೆ ಮಾತ್ರ ಹೊಂದಿದೆ ಹಾಗೂ ಸಂಪೂರ್ಣ ಸಹಕರಿಸುವಂತೆ ರಾಜ್ಯಗಳಿಗೆ ಸೂಚಿಸಬೇಕೆಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಇದು ಸರ್ಕಾರಕ್ಕೆ ಬಿಟ್ಟ ವಿಷಯವಾಗಿದ್ದು ಕೇಂದ್ರವೇ ರಾಜ್ಯಗಳಿಗೆ ನಿರ್ದೇಶನ ನೀಡಬೇಕೆಂದು ಹೇಳಿತು.
ಅರ್ಜಿದಾರರಾಗಿದ್ದ ಎಬಿವಿಪಿಯು ಯೋಜನೆಯ ನಿರ್ವಹಣೆಗೆ ರಚಿಸಲಾದ ಕ್ರಿಯಾ ಸಮಿತಿಯ ಅಧ್ಯಕ್ಷರು ಸಲ್ಲಿಸಿದ ಈ ವರದಿ ಅತೃಪ್ತಿಕರ. ಏಕೆಂದರೆ ಇದು ಹೊಸ ಹಾಸ್ಟೆಲ್ಗಳ ನಿರ್ಮಾಣಕ್ಕೆ ಮಾತ್ರ ಸಂಬಂಧಿಸಿದ್ದಾಗಿದ್ದು, ಆದರೆ ಅರ್ಜಿ ಹಳೆಯ ಹಾಸ್ಟೆಲ್ಗಳ ನಿರ್ವಹಣೆ ಮತ್ತು ದುರಸ್ತಿಯನ್ನು ಕೇಂದ್ರೀಕರಿಸಿದ್ದಾಗಿದೆ ಎಂದು ತಿಳಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.