ನವದೆಹಲಿ (ಪಿಟಿಐ): ನಾಗಪುರದಲ್ಲಿ ನಡೆದ ಆರ್ಎಸ್ಎಸ್ ಕಾರ್ಯಕ್ರಮ ಮತ್ತು ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಭಾಷಣವನ್ನು ದೂರದರ್ಶನದಲ್ಲಿ ನೇರ ಪ್ರಸಾರ ಮಾಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ದೂರದರ್ಶನ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಖಾಸಗಿ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡುವ ಮೂಲಕ ಕೇಂದ್ರ ಸರ್ಕಾರ ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡಿದೆ. ಅಧಿಕಾರ ದುರುಪಯೋಗದ ನೈತಿಕ ಹೊಣೆ ಹೊತ್ತು ಕೇಂದ್ರ ವಾರ್ತಾ, ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದರು.
ಆರ್ಎಸ್ಎಸ್ ಕಾರ್ಯಸೂಚಿಯ ಪ್ರಸಾರಕ್ಕೆ ಬಿಜೆಪಿ ಸರ್ಕಾರ ದೂರದರ್ಶನವನ್ನು ಬಳಸಿಕೊಂಡಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ಆರೋಪಿಸಿದರು. ದೇಶದ ಧರ್ಮನಿರಪೇಕ್ಷ ನಿಲುವಿನಲ್ಲಿ ನಂಬಿಕೆ ಇಟ್ಟ ಜನರ ಭಾವನೆಗಳಿಗೆ ಭಾಗವತ್ ಅವರ ಭಾಷಣದಿಂದ ಘಾಸಿ ಆಗಿದೆ. ದೂರದರ್ಶನ ದುರುಪಯೋಗ ಪಡಿಸಿಕೊಂಡ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಬಹಿರಂಗವಾಗಿ ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಲವ್ಲಿ ಆಗ್ರಹಿಸಿದರು.
ಪ್ರತಿಭಟನಾನಿರತ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಆರ್ಎಸ್ಎಸ್ ವಿವಾದಾತ್ಮಕ ಧಾರ್ಮಿಕ ಹಾಗೂ ರಾಜಕೀಯ ಸಂಘಟನೆಯಾಗಿದ್ದು ಅದರ ಕಾರ್ಯಕ್ರಮದ ಪ್ರಸಾರ ಸರಿಯಲ್ಲ. ನಾಗಪುರದ ಆರ್ಎಸ್ಎಸ್ ಕೇಂದ್ರ ಕಚೇರಿಯು ದೇಶದ ಸರ್ಕಾರವನ್ನು ನಿಯಂತ್ರಿಸಲು ಅವಕಾಶ ನೀಡುವುದಿಲ್ಲ ಎಂದು ಪಕ್ಷದ ವಕ್ತಾರ ಮುಕೇಶ್ ಶರ್ಮಾ ಆಕ್ರೋಶ ವ್ಯಕ್ತಪಡಿಸಿದರು.
‘ವೃತ್ತಿಪರತೆ ಮೈಗೂಡಿಸಬೇಕಿದೆ’
ನಾಗಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ವಿಜಯದಶಮಿಯಂದು ಮಾತನಾಡಿದ್ದನ್ನು ದೂರದರ್ಶನವು ನೇರ ಪ್ರಸಾರ ಮಾಡಿದ ಕ್ರಮವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರು ಸಮರ್ಥಿಸಿಕೊಂಡಿದ್ದಾರೆ.
ಸ್ವಾಯತ್ತ ಸಂಸ್ಥೆಯಾದ ದೂರದರ್ಶನದಲ್ಲಿ ವೃತ್ತಿಪರತೆ ಮೈಗೂಡಿಸುವುದು ಸರ್ಕಾರದ ಉದ್ದೇಶವಾಗಿದೆ. ಆದ್ದರಿಂದ ಅದರ ಕಾರ್ಯದಲ್ಲಿ ಸರ್ಕಾರ ಮಧ್ಯ ಪ್ರವೇಶಿಸುವುದಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಬೇರೆ ಖಾಸಗಿ ವಾಹಿನಿಗಳು ಭಾಗವತ್ ಅವರ ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಿವೆ. ಹಾಗಿರುವಾಗ ದೂರದರ್ಶನವೂ ಅದೇ ಕೆಲಸ ಮಾಡಿದರೆ ತಪ್ಪೇನು ಎಂದು ಅವರು ಕೇಳಿದರು.