ನವದೆಹಲಿ: ಕನ್ನಡದ ಖ್ಯಾತ ಲೇಖಕ, ವಿಮರ್ಶಕ ಡಾ.ಜಿ.ಎಚ್. ನಾಯಕ ಅವರು 2014ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ‘ಉತ್ತರಾರ್ಧ’ ಪ್ರಬಂಧ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ.
ಪ್ರಶಸ್ತಿಯು ರೂ1 ಲಕ್ಷ ನಗದು, ತಾಮ್ರದ ಫಲಕ, ಶಾಲು ಒಳಗೊಂಡಿದೆ. 2015ರ ಮಾರ್ಚ್ 9ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಕನ್ನಡ ವಿಭಾಗದ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಡಾ. ಬಿ.ಎ. ವಿವೇಕ ರೈ, ಪ್ರೊ. ಪ್ರಧಾನ ಗುರುದತ್ತ ಹಾಗೂ ವೀರಣ್ಣ ದಂಡೆ ತೀರ್ಪುಗಾರರಾಗಿದ್ದರು.
ಖಗೋಳ ವಿಜ್ಞಾನಿ ಜಯಂತ ನಾರಲೀಕರ್ (ಮರಾಠಿ), ರಾಜಪಲೆಂ ಚಂದ್ರಶೇಖರ ರೆಡ್ಡಿ (ತೆಲುಗು), ಮಾಧವಿ ಸರದೇಸಾಯಿ (ಕೊಂಕಣಿ), ಸುಭಾಷ್ಚಂದ್ರನ್ (ಮಲಯಾಳಂ), ಪೂಮಣಿ (ತಮಿಳು) ಸೇರಿ 22 ಭಾಷೆಗಳ ಲೇಖಕರನ್ನೂ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಂಸ್ಕೃತ ಮತ್ತು ಮಣಿಪುರಿ ಲೇಖಕರನ್ನು 15 ದಿನದೊಳಗೆ ಆಯ್ಕೆ ಮಾಡುವುದಾಗಿ ಅಕಾಡೆಮಿ ಕಾರ್ಯದರ್ಶಿ ಡಾ. ಕೆ. ಶ್ರೀನಿವಾಸ ರಾವ್ ಶುಕ್ರವಾರ ತಿಳಿಸಿದರು.