ಕೋಲಾರ: ಡಾ.ಎಲ್.ಬಸವರಾಜು ಪ್ರತಿಷ್ಠಾನ ನೀಡುವ ಡಾ.ಎಲ್.ಬಸವರಾಜು ಪ್ರಶಸ್ತಿಗೆ ವಿಮರ್ಶಕ ಡಾ.ಜಿ.ರಾಮಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಮಾ.22ರಂದು ನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಲೇಖಕ ಎಂ.ಎಸ್.ಪ್ರಭಾಕರ್ (ಕಾಮರೂಪಿ) ಪ್ರಶಸ್ತಿ ಪ್ರದಾನ ಮಾಡ-ಲಿದ್ದಾರೆ ಎಂದು ಪ್ರತಿಷ್ಠಾನದ ಪ್ರಮುಖರಾದ ಲಕ್ಷ್ಮೀಪತಿ ಕೋಲಾರ ಮತ್ತು ಡಾ.ಎನ್.ಬಿ.ಚಂದ್ರಮೋಹನ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಲೇಖಕ ಡಾ.ಬರಗೂರು ರಾಮಚಂದ್ರಪ್ಪ ಅಭಿನಂದನಾ ನುಡಿಗಳನ್ನು ಆಡಲಿದ್ದು, ವಿಶಾಲಾಕ್ಷಿ ಬಸವರಾಜು ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಜಿ.ರಾಮಕೃಷ್ಣ ಬದುಕು ಮತ್ತು ಬರಹ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
ಮೊದಲ ಗೋಷ್ಠಿಯಲ್ಲಿ ಕನ್ನಡ ವಿಚಾರ ಸಾಹಿತ್ಯಕ್ಕೆ ಡಾ.ಜಿ.ಆರ್.ಕೊಡುಗೆ ಕುರಿತು ಡಾ.ಚಂದ್ರಶೇಖರ ನಂಗಲಿ, ಡಾ.ಜಿ.ಆರ್ ಅವರ ಭೌತವಾದಿ ತಾತ್ವಿಕ ಚಿಂತನೆಗಳ ಕುರಿತು ಕೆ.ಸಿ.ರಘು ಮಾತನಾಡುತ್ತಾರೆ. ಶೈಲಜಾ ಅಧ್ಯಕ್ಷತೆ ವಹಿಸುತ್ತಾರೆ. ಮಧ್ಯಾಹ್ನ ನಡೆಯುವ ಗೋಷ್ಠಿಯಲ್ಲಿ ಜಿ.ಆರ್.ವ್ಯಕ್ತಿತ್ವ ಮತ್ತು ಹೋರಾಟದ ಬದುಕು ಕುರಿತು ಎನ್.ಗಾಯತ್ರಿ ಮತ್ತು ಜಿ.ಆರ್.ಅನುವಾದಗಳು ಹಾಗೂ ವ್ಯಕ್ತಿ ಚಿತ್ರಗಳ ಕುರಿತು ಡಾ.ರಾಮಲಿಂಗಪ್ಪ ಟಿ.ಬೇಗೂರು ಮಾತನಾಡುತ್ತಾರೆ. ಸಿದ್ದನಗೌಡ ಪಾಟೀಲ ಅಧ್ಯಕ್ಷತೆ ವಹಿಸುತ್ತಾರೆ ಎಂದರು.
ಮಧ್ಯಾಹ್ನ 3ಗಂಟೆಗೆ ರಾಮಕೃಷ್ಣ ಅವರೊಡನೆ ನಡೆಯುವ ಸಂವಾದದಲ್ಲಿ ವಿಎಸ್ಎಸ್ ಶಾಸ್ತ್ರಿ, ಡಾ.ಡಿ.ಡೊಮಿನಿಕ್, ಗೀತಾ, ಬಿ.ಎಸ್.ಕೃಷ್ಣಮೂರ್ತಿ, ಜೆ.ಜಿ.ನಾಗರಾಜ್ ಪಾಲ್ಗೊಳ್ಳುತ್ತಾರೆ.