ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಿ ನೀಡಿದ್ದ ತೀರ್ಪನ್ನು ಪುನರ್ ಪರಿಶೀಲಿಸಲು ಸುಪ್ರೀಂಕೋರ್ಟ್ ಮಂಗಳವಾರ ನಿರಾಕರಿಸಿದೆ.
‘ಕೇಂದ್ರ ಸಲ್ಲಿಸಿದ ಪುನರ್ಪರಿಶೀಲನಾ ಅರ್ಜಿ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಿದ್ದೇವೆ. ತೀರ್ಪನ್ನು ಪುನರ್ಪರಿಶೀಲಿಸುವ ಪ್ರಶ್ನೆಯೇ ಇಲ್ಲ. ಹಾಗಾಗಿ ನಾವು ಈ ಅರ್ಜಿಯನ್ನು ವಜಾ ಮಾಡಿದ್ದೇವೆ’ ಎಂದು ಮುಖ್ಯನ್ಯಾಯಮೂರ್ತಿ ಪಿ.ಸದಾಶಿವಂ ಹಾಗೂ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್ ಮತ್ತು ಎಸ್.ಕೆ.ಸಿಂಗ್ ಹೇಳಿದರು.
ಈ ಪ್ರಕರಣದ ವಾಸ್ತವಾಂಶಗಳನ್ನು ತ್ರಿಸದಸ್ಯ ಪೀಠ ಪರಿಶೀಲಿಸಿಲ್ಲ.
ಹಂತಕರ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಿ ತೀರ್ಪು ನೀಡುವ ಮೂಲಕ ಸರ್ಕಾರದ ಅಧಿಕಾರ ವ್ಯಾಪ್ತಿಯೊಳಗೆ ಹಸ್ತಕ್ಷೇಪ ಮಾಡಿದೆ’ ಎಂದು ಕೇಂದ್ರ ತನ್ನ ಅರ್ಜಿಯಲ್ಲಿ ವಾದಿಸಿತ್ತು.
‘ಈ ಆಕ್ಷೇಪಾರ್ಹ ತೀರ್ಪು ಕಾನೂನುಬದ್ಧವಾಗಿಲ್ಲ ಎನ್ನುವುದು ಸ್ಪಷ್ಟವಾಗಿ ವೇದ್ಯವಾಗುತ್ತದೆ. ಸುಪ್ರೀಂಕೋರ್ಟ್ ಹಾಕಿಕೊಟ್ಟ ತತ್ವಗಳಿಗೂ ಇದು ವಿರುದ್ಧವಾಗಿದೆ’ ಎಂದೂ ಅದು ಹೇಳಿತ್ತು.
ರಾಜೀವ್ ಹಂತಕರಾದ ಸಾಂತನ್, ಮುರುಗನ್ ಮತ್ತು ಪೇರ್ಅರಿವಾಳನ್ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಿ ಫೆಬ್ರುವರಿ 18ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.
ಕ್ಷಮಾದಾನ ಮನವಿ ಇತ್ಯರ್ಥಕ್ಕೆ ವಿಳಂಬವಾಗಿರುವುದರಿಂದ ತಮಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ರದ್ದು ಮಾಡಬೇಕೆಂದು ಕೋರಿ ಈ ಮೂವರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.