ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನವು ಜುಲೈ 7ರಿಂದ ಆರಂಭವಾಗಲಿದ್ದು, ನರೇಂದ್ರ ಮೋದಿ ಸರ್ಕಾರದ ಚೊಚ್ಚಲ ಬಜೆಟ್ ಜುಲೈ 10 ರಂದು ಮಂಡನೆ ಆಗಲಿದೆ.
ಜುಲೈ 8 ರಂದು ರೈಲ್ವೆ ಸಚಿವರು ರೈಲ್ವೆ ಬಜೆಟ್ ಮಂಡಿಸುವರು. 9ರಂದು ಆರ್ಥಿಕ ಸಮೀಕ್ಷೆ ಬಿಡುಗಡೆಗೊಳ್ಳಲಿದೆ. ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯ ನಾಯ್ಡು ಅವರ ಕಚೇರಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಜುಲೈ 7ರಿಂದ ಆಗಸ್ಟ್ 14ರವರೆಗೆ ಅಧಿವೇಶನ ನಡೆಸಲು ನಿರ್ಧರಿಸಲಾಯಿತು.
ಯುಪಿಎ ಸರ್ಕಾರವು ಸಂಸತ್ತಿನ ಕೊನೆಯ ಅಧಿವೇಶನದಲ್ಲಿ ಮಂಡಿಸಿದ ಲೇಖಾನುದಾನದ ಅವಧಿ ಜುಲೈ 31ರಂದು ಮುಗಿಯಲಿದ್ದು, ಅಷ್ಟರೊಳಗೆ ಹೊಸ ಬಜೆಟ್ ಮಂಡಿಸಿ, ಒಪ್ಪಿಗೆ ಪಡೆಯಬೇಕಾಗಿದೆ.
ಪರಿಶಿಷ್ಟ ಜಾತಿ– ಪಂಗಡಗಳ ಮೇಲಿನ ದೌರ್ಜನ್ಯ ತಡೆ, ಸೆಬಿ ಹಾಗೂ ಟ್ರಾಯ್ ಸಂಬಂಧದ ಸುಗ್ರೀವಾಜ್ಞೆಗಳನ್ನು ಮಸೂದೆ ಮೂಲಕ ಬದಲಾಯಿಸಲು ಗೃಹ ಸಚಿವ ರಾಜನಾಥ್ಸಿಂಗ್ ನೇತೃತ್ವದ ‘ಸಿಸಿಪಿಎ’ ತೀರ್ಮಾನಿಸಿತು.
ಪ್ರತಿಪಕ್ಷದ ಸ್ಥಾನಮಾನ: ಬಜೆಟ್ ಅಧಿವೇಶನದಲ್ಲಿ, ರೈಲು ಪ್ರಯಾಣ ಹಾಗೂ ಸರಕು ಸಾಗಣೆ ದರಗಳನ್ನು ಏರಿಸಿರುವ ಸರ್ಕಾರದ ಕ್ರಮವನ್ನು ವಿರೋಧ ಪಕ್ಷಗಳು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ಅಧಿವೇಶನದ ಸಂದರ್ಭದಲ್ಲಿ ಕಾಂಗ್ರೆಸ್ಗೆ ವಿರೋಧ ಪಕ್ಷದ ಸ್ಥಾನಮಾನ ಕೊಡುವ ಕುರಿತು ನಿರ್ಣಯ ಕೈಗೊಳ್ಳುವುದಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಬಿಜೆಪಿ ಬಳಿಕ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಪಡೆದ ದೊಡ್ಡ ಪಕ್ಷವಾಗಿದೆ. ಅಲ್ಲದೆ, ಚುನಾವಣೆಗೆ ಮುನ್ನ ಮಾಡಿಕೊಂಡಿರುವ ಮೈತ್ರಿಕೂಟದ ಸದಸ್ಯರ ಸಂಖ್ಯೆ ಅಗತ್ಯಕ್ಕಿಂತಲೂ ಹೆಚ್ಚಾಗಿದೆ ಎಂದು ಪ್ರತಿಪಾದಿಸಿದೆ. ಆದರೆ, ಯಾವುದೇ ಕಾರಣಕ್ಕೂ ವಿರೋಧ ಪಕ್ಷದ ಸ್ಥಾನಮಾನವನ್ನು ಬೇಡುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ.
ಬಜೆಟ್ ಅಧಿವೇಶನದಲ್ಲೇ ಲೋಕಸಭೆ ಉಪ ಸ್ಪೀಕರ್ ಚುನಾವಣೆಯೂ ನಡೆಯಲಿದೆ ಎಂದು ಈಗಾಗಲೇ ವೆಂಕಯ್ಯ ನಾಯ್ಡು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.