ನವದೆಹಲಿ (ಪಿಟಿಐ): ಸಂಸತ್ ದಾಳಿ ಅಪರಾಧಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ವಿರೋಧಿಸಿ ಕಾರ್ಯಕ್ರಮ ನಡೆಸಿದ ಆರೋಪದಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಎಂಬವರನ್ನು ಬಂಧಿಸಲಾಗಿದೆ.
ರಾಷ್ಟ್ರದ್ರೋಹ ಮತ್ತು ಅಪರಾಧ ಒಳಸಂಚು ಆರೋಪಗಳನ್ನು ಅವರ ವಿರುದ್ಧ ಹೊರಿಸಲಾಗಿದೆ.
ಶಿಸ್ತು ಸಮಿತಿಯಿಂದ ಮಧ್ಯಂತರ ವರದಿ ಪಡೆದುಕೊಂಡಿರುವ ವಿ.ವಿ. ಆಡಳಿತವು ಎಂಟು ವಿದ್ಯಾರ್ಥಿಗಳ ಮೇಲೆ ಶೈಕ್ಷಣಿಕ ಚಟುವಟಿಕೆಯಲ್ಲಿ ಭಾಗವಹಿಸದಂತೆ ನಿಷೇಧ ಹೇರಿದೆ.
ಇದು ಅಲ್ಲಿನ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿಯೇತರ ಪಕ್ಷಗಳು ಬಂಧನವನ್ನು ‘ತುರ್ತು ಪರಿಸ್ಥಿತಿಯಂತಹ ಸ್ಥಿತಿ’ ಎಂದು ಬಣ್ಣಿಸಿವೆ.
ದೇಶ ವಿರೋಧಿ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ವಿ.ವಿ ವಿದ್ಯಾರ್ಥಿಗಳ ಪ್ರತಿಭಟನೆ ಮೂರನೇ ದಿನಕ್ಕೆ ತಲುಪಿದ್ದು, ‘ವಿದ್ಯಾರ್ಥಿಗಳನ್ನು ಬೇಟೆಯಾಡಲಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿ ಸಂಸದ ಮಹೇಶ್ ಗಿರಿ ಮತ್ತು ಎಬಿವಿಪಿ ಸದಸ್ಯರ ದೂರಿನ ಮೇರೆಗೆ ಗುರುವಾರ ಪೊಲೀಸರು ರಾಷ್ಟ್ರದ್ರೋಹ ಮತ್ತು ಅಪರಾಧ ಒಳಸಂಚು ಪ್ರಕರಣ ದಾಖಲಿಸಿಕೊಂಡಿದ್ದರು. ಶುಕ್ರವಾರ ಕನ್ಹಯ್ಯಾ ಅವರನ್ನು ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯವು ಅವರನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಬಂಧನದ ನಂತರ ವಿದ್ಯಾರ್ಥಿಗಳು ಕುಲಪತಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ, ಮಧ್ಯಪ್ರವೇಶ ನಡೆಸುವಂತೆ ಆಗ್ರಹಿಸಿದ್ದಾರೆ.
ವಿದ್ಯಾರ್ಥಿಗಳನ್ನು ‘ಉಗ್ರರಂತೆ’ ಬಿಂಬಿಸಲಾಗುತ್ತಿದ್ದು, ಮಫ್ತಿಯಲ್ಲಿರುವ ಪೊಲೀಸರು ವಿ.ವಿ ಆವರಣಕ್ಕೆ ಬಂದು ಬಂಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಖ್ಯಾಂಶಗಳು
* ರಾಷ್ಟ್ರದ್ರೋಹ, ಅಪರಾಧ ಒಳಸಂಚು ಆರೋಪ