ನವದೆಹಲಿ (ಪಿಟಿಐ): ಕಳವು ಪ್ರಕರಣದ ಅಪರಾಧಿ ಹಾಗೂ ಜೆಡಿಯು ರಾಷ್ಟ್ರೀಯ ಕಾರ್ಯದರ್ಶಿ ವಿರೇಂದ್ರ ಸಿಂಗ್ ಬಿಧುರಿಗೆ ದೆಹಲಿ ನ್ಯಾಯಾಲಯ ಶನಿವಾರ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಕಳ್ಳತನ ಪ್ರಕರಣವೊಂದರಲ್ಲಿ ಶಿಕ್ಷೆಗೆ ಒಳಗಾಗಿದ್ದ ವಿರೇಂದ್ರ ಸಿಂಗ್ನನ್ನು ಕಳೆದ ವರ್ಷ ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ವಿವೇಕ್ ಗುಪ್ತಾ ಎಂಬುವರು ದೆಹಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಬಿಧುರಿಯನ್ನು ಜೈಲಿಗೆ ಅಟ್ಟಿತು.
‘ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸಿದ ಹೊರತಾಗಿಯೂ ಅಪರಾಧಿ ಇನ್ನೂ ಪಾಠ ಕಲಿತಿಲ್ಲ. ಸಿಹಿಯಾದ ಮಾತ್ರೆಗಳು ನಿರೀಕ್ಷಿತ ಕೆಲಸ ಮಾಡದಿದ್ದಾಗ ರೋಗ ಗುಣಪಡಿಸಲು ಕಹಿ ಮಾತ್ರೆ ನೀಡುವುದು ಅನಿವಾರ್ಯ’ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಾಜೇಂದರ್ ಕುಮಾರ್ ಅಭಿಪ್ರಾಯಪಟ್ಟರು.
ದಕ್ಷಿಣ ದೆಹಲಿ ಕ್ಷೇತ್ರದ ಬಿಜೆಪಿ ಸಂಸದ ರಮೇಶ್ ಬಿಧುರಿ ಸಹೋದರನಾದ ವಿರೇಂದ್ರ ಸಿಂಗ್, ಕೊಲೆ ಪ್ರಕರಣ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಈ ಹಿಂದೆ ಶಿಕ್ಷೆ ಅನುಭವಿಸಿದ್ದ.