ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ ಸಂಬಂಧ ಪ್ರಕಾಶ್ ಇಂಡಸ್ಟ್ರೀಸ್ ಲಿಮಿಟೆಡ್ (ಪಿಐಎಲ್) ಮತ್ತು ಇತರರ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದು ಮಾಡುವ ಬಗ್ಗೆ ಸಿಬಿಐ ಸಲ್ಲಿಸಿರುವ ಪರಿಸಮಾಪ್ತಿ ವರದಿಯನ್ನು ಜ.20ರಂದು ಪರಿಶೀಲಿಸುವುದಾಗಿ ಸಿಬಿಐ ವಿಶೇಷ ನ್ಯಾಯಾಲಯ ಮಂಗಳವಾರ ತಿಳಿಸಿದೆ.
‘ಈ ಪ್ರಕರಣವನ್ನು ಪರಿಸಮಾಪ್ತಿಗೊಳಿಸಲು ಅನುಮತಿ ಕೋರಿ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ವರದಿಯನ್ನು ಕೋರ್ಟ್ಗೆ ಸಲ್ಲಿಸಿದ್ದೇವೆ’ ಎಂದು ಸಿಬಿಐ ವಕೀಲ ವಿ.ಕೆ. ಶರ್ಮಾ ತಿಳಿಸಿದರು. ಛತ್ತೀಸಗಡದ ಫತೇಪುರ್ದಲ್ಲಿನ ಕಲ್ಲಿದ್ದಲು ಗಣಿಯ ಪರವಾನಗಿಯ ಮಂಜೂರಾತಿಗೆ ಅರ್ಜಿ ಸಲ್ಲಿಸುವಾಗ ಪಿಐಎಲ್ ತನ್ನ ನಿವ್ವಳ ಆಸ್ತಿಯ ಬಗ್ಗೆ ಸರಿಯಾದ ಮಾಹಿತಿ ನೀಡಿರಲಿಲ್ಲ.
ಆದ್ದರಿಂದ ಈ ಪರವಾನಗಿ ಮಂಜೂರಾತಿಯಲ್ಲಿ ಅಕ್ರಮ ನಡೆದಿದೆ ಎಂದು ಪಿಐಎಲ್ ಮತ್ತು ಈ ಕಂಪೆನಿಯ ಮೂವರು ಹಿರಿಯ ಅಧಿಕಾರಿಗಳು, ಕಂಪೆನಿ ಜೊತೆ ಸಂಯೋಜನೆ ಹೊಂದಿರುವ ಇತರರು ಹಾಗೂ ಕಲ್ಲಿದ್ದಲು ಸಚಿವಾಲಯದ ಕೆಲವು ಅಧಿಕಾರಿಗಳ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.
ಪಿಐಎಲ್ ಮತ್ತು ಮತ್ತೊಂದು ಕಂಪೆನಿಗೆ ಜಂಟಿಯಾಗಿ ಫತೇಪುರ್ನಲ್ಲಿ ಕಲ್ಲಿದ್ದಲು ಗಣಿ ಮಂಜೂರಾಗಿತ್ತು. ಗಣಿ ಪರವಾನಗಿ ನೀಡುವ 35ನೇ ಪರಿಶೀಲನಾ ಸಮಿತಿಯು ಈ ಮಂಜೂರಾತಿ ನೀಡಿತ್ತು.