ನವದೆಹಲಿ (ಪಿಟಿಐ): ಟಟ್ರಾ ಟ್ರಕ್ಗಳ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಭೂ ಸೇನೆಯ ಆಗಿನ ಮುಖ್ಯಸ್ಥ ಜನರಲ್ ವಿ. ಕೆ. ಸಿಂಗ್ ಅವರಿಗೆ ಲಂಚ ನೀಡಲು ಪ್ರಯತ್ನಿಸಿದ ಆರೋಪ ಎದುರಿಸುತ್ತಿರುವ ನಿವೃತ್ತ ಲೆ. ಜ. ತೇಜಿಂದರ್ ಸಿಂಗ್ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮಧು ಜೈನ್ ಅವರು, ತೇಜಿಂದರ್ ಅವರನ್ನು ಬಂಧಿಸಿ ಅ.20ರವರೆಗೆ ನ್ಯಾಯಾಂಗ ಬಂಧನದಲ್ಲಿಡಲು ಆದೇಶಿಸಿದರು.
ಸಮನ್ಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ತೇಜಿಂದರ್ ಸಿಂಗ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಧೀಶರು ಆದೇಶ ಹೊರಡಿಸಿದ ಕೂಡಲೇ ಅಲ್ಲಿಯೇ ಇದ್ದ ಸಿಬಿಐ ಅಧಿಕಾರಿ ತೇಜಿಂದರ್ ಅವರನ್ನು ವಶಕ್ಕೆ ತೆಗೆದುಕೊಂಡು ಅವರನ್ನು ತಿಹಾರ್ ಜೈಲಿಗೆ ಕರೆದೊಯ್ದರು.
2010ರ ಸೆಪ್ಟೆಂಬರ್ನಲ್ಲಿ ತೇಜಿಂದರ್ ಸಿಂಗ್ ಅವರು 1,676 ಟಟ್ರಾ ಟ್ರಕ್ ಖರೀದಿಯ ಕಡತವನ್ನು ವಿಲೇವಾರಿ ಮಾಡಲು ಆಗಿನ ಜನರಲ್ ವಿ. ಕೆ. ಸಿಂಗ್ ಅವರಿಗೆ 14 ಕೋಟಿ ರೂಪಾಯಿಗಳ ಲಂಚ ನೀಡಲು ಪ್ರಯತ್ನಿಸಿದ್ದರು ಎಂದು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.
ತೇಜಿಂದರ್ ಸಿಂಗ್ ಲಂಚ ನೀಡುವ ಪ್ರಸ್ತಾವನೆ ಮಾಡಿದ ಕೂಡಲೇ ಕೆರಳಿದ್ದ ವಿ. ಕೆ. ಸಿಂಗ್ ಅವರು ತೇಜಿಂದರ್ ಅವರನ್ನು ತಮ್ಮ ಕೊಠಡಿಯಿಂದ ಹೊರಗೆ ಕಳುಹಿಸಿ ಈ ವಿಚಾರವನ್ನು ಆಗಿನ ರಕ್ಷಣಾ ಸಚಿವ ಆಂಟನಿ ಅವರ ಗಮನಕ್ಕೆ ತಂದಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.