ಸುರತ್ಕಲ್: ಜಿಲ್ಲಾ ಬಂದ್ ಕರೆಗೆ ಸುರತ್ಕಲ್ನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಲಾಗಿತ್ತು. ವಿರಳ ವಾಹನ ಸಂಚಾರವಿದ್ದು ಬಂದ್ ಯಶಸ್ವಿಯಾಗಿ ನಡೆಯಿತು.
ಮುಂಜಾನೆ ಸುರತ್ಕಲ್ ಮುಖ್ಯ ಪ್ರದೇಶದಲ್ಲಿ ಸೇರಿದ ಪ್ರತಿಭಟನಾಕಾರರು ಫ್ಲೈ ಓವರ್ ಬಳಿ ಟಯರ್ ಹಾಕಿ ಬೆಂಕಿ ಹಚ್ಚಿ ಸಂಚಾರಕ್ಕೆ ತಡೆಯೊಡ್ಡಿದರು. ಲಾರಿ ಮತ್ತಿತರ ವಾಹನ ಸಂಚಾರಕ್ಕೂ ಪ್ರತಿಭಟನಾಕಾರರು ತಡೆಯೊಡ್ಡಿದರು. ಜಂಕ್ಷನ್ ಸಹಿತ ಇನ್ನೂ ಕೆಲವೆಡೆ ಟಯರ್ಗೆ ಬೆಂಕಿ ಹಚ್ಚುವ ಯತ್ನ ಮತ್ತು ರಸ್ತೆಗೆ ಕಲ್ಲು ಇಡುವ ಪ್ರಯತ್ನ ನಡೆಯಿತಾದರೂ ಪೊಲೀಸರು ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ.
ಮುಂಬೈ ಮತ್ತು ಬೆಂಗಳೂರಿನಿಂದ ರೈಲಿನಲ್ಲಿ ಬಂದು ಸುರತ್ಕಲ್ ರೈಲು ನಿಲ್ದಾಣದಲ್ಲಿ ಇಳಿದ ಪ್ರಯಾಣಿಕರು ಮನೆ ಸೇರಲು ರಿಕ್ಷಾ ಮತ್ತು ಇತರ ವಾಹನ ಸಿಗದೆ ತುಂಬಾ ಪರದಾಟ ನಡೆಸಿದ್ದರು. ಕೆಲವರಂತೂ ಸಾಕಷ್ಟು ಹೊತ್ತು ಬಸ್ ನಿಲ್ದಾಣದಲ್ಲೇ ಲಗೇಜ್ ಹೊತ್ತು ಕಾಯುತ್ತಾ ನಿಂತಿರುವ ದೃಶ್ಯ ಕಾಣಿಸಿತು. ಒಂದೆರಡು ಔಷಧಿ ಅಂಗಡಿ ತೆರೆದಿದ್ದವು. ಸುರತ್ಕಲ್ ಪ್ರದೇಶ ಬಹುತೇಕ ನಿರ್ಜನವಾಗಿತ್ತು. ಪೊಲೀಸರು ನಿರಂತರ ಗಸ್ತು ತಿರುಗುತ್ತಿದ್ದ ಕಾರಣ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.
ಮಾತಿನ ಚಕಮಕಿ: ಬಂದ್ಗೆ ಬೆಂಬಲ ನೀಡಿಲ್ಲ ಎನ್ನುವ ಕಾರಣಕ್ಕೆ ಕಾರ್ಪೊರೇಟರ್ ಹಾಗೂ ಹೋಟೆಲ್ ಮಾಲೀಕರೊಬ್ಬರ ನಡುವೆ ಸುರತ್ಕಲ್ನಲ್ಲಿ ಮಾತಿನ ಚಕಮಕಿ ನಡೆಯಿತು.ಮುಂಜಾನೆ ಹೋರಾಟಗಾರರು ಸುರತ್ಕಲ್ ಮುಖ್ಯ ಪೇಟೆಯಲ್ಲಿ ಜಮಾಯಿಸಿ ಟೈರ್ ಸುಟ್ಟು ವಾಹನಗಳಿಗೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದ್ದರು. ಇಲ್ಲಿನ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಮುಚ್ಚಿದ್ದವು.
ಆದರೆ ಸುರತ್ಕಲ್ ಮುಖ್ಯ ಪೇಟೆ ಬಳಿ ಇರುವ ಸಿಟಿ ಲಂಚ್ ಹೋಮ್ ವ್ಯವಹಾರ ನಡೆಸುತ್ತಿತ್ತು. ಬೆಳಗ್ಗೆ ರೈಲಿನಲ್ಲಿ ಬರುವವರಿಗೆ ಹಾಗೂ ಮುಂಜಾನೆಗೆ ಬೇರೆ ಕಡೆಯಿಂದ ಬರುವವರಿಗೆ ತೊಂದರೆಯಾಗದಿರಲೆಂದು ಹೊಟೇಲ್ ತೆರೆದಿಟ್ಟಿರುವುದಾಗಿ ಹೊಟೇಲ್ ಮಾಲೀಕರು ತಿಳಿಸಿದ್ದು ಇದಕ್ಕೆ ಸ್ಥಳೀಯ ಕಾರ್ಪೊರೇಟರ್ ಮತ್ತು ಪ್ರತಿಭಟನಾಕಾರರು ಆಕ್ರೋಶ ಸೂಚಿಸಿದರು.
ಕೂಡಲೇ ಬಂದ್ ನಡೆಸುವಂತೆ ತಿಳಿಸಿದರೂ, ತಿಂಡಿ ಮಾಡಿಟ್ಟಿದ್ದು ಉಳಿದಿದೆ; ಸ್ವಲ್ಪ ಹೊತ್ತಲ್ಲೇ ಬಂದ್ ಮಾಡುವುದಾಗಿ ತಿಳಿಸಿದರೂ, ಪ್ರತಿಭಟನಾಕಾರರು ವಿರೋಧ ವ್ಯಕ್ತಪಡಿಸಿದ ಕಾರಣ ಮಾತಿನ ಚಕಮಕಿ ನಡೆಯಿತು. ಹೋಟೆಲ್ ಮಾಲೀಕ, ಪ್ರತಿಭಟನಾನಿರತರು ಕಾಂಗ್ರೆಸ್ನವರೇ ಆದುದರಿಂದ ಮುಖಂಡರು ಪರಿಸ್ಥಿತಿಯನ್ನು ಶಾಂತಗೊಳಿಸಿದರು. ಕೊನೆಗೆ ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದು ಹೋಟೆಲ್ ಬಂದ್ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.