ಬಾಗ್ದಾದ್ (ಎಪಿ): ಇಸ್ಲಾಮಿಕ್ ಸ್ಟೇಟ್ (ಐ.ಎಸ್) ಉಗ್ರರ ನಿಯಂತ್ರಣದಲ್ಲಿರುವ ಉತ್ತರ ಇರಾಕ್ನ್ನು ಮರಳಿ ವಶಕ್ಕೆ ಪಡೆಯುವ ಪ್ರಮುಖ ಬೆಳವಣಿಗೆಯೊಂದರಲ್ಲಿ ಸೋಮವಾರ ಇರಾಕ್ನ ಭದ್ರತಾ ಪಡೆಗಳು ಷಿಯಾ ಮತ್ತು ಸುನ್ನಿ ಮುಸಲ್ಮಾನರ ಬೆಂಬಲದೊಂದಿಗೆ ಸದ್ದಾಂ ಹುಸೇನ್ ತವರು ಪಟ್ಟಣದಲ್ಲಿ ಭಾರಿ ಪ್ರಮಾಣದ ಸೇನಾ ಕಾರ್ಯಾಚರಣೆ ಆರಂಭಿಸಿದವು ಎಂದು ಸರ್ಕಾರಿ ಸ್ವಾಮ್ಯದ ಟಿ.ವಿ ವರದಿ ಮಾಡಿದೆ.
ಸುನ್ನಿ ಪಂಗಡದ ಪ್ರಾಬಲ್ಯವಿರುವ ಉತ್ತರ ಬಾಗ್ದಾದ್ನ ಟಿಕ್ರಿತ್ ಹಾಗೂ ಎರಡನೇ ದೊಡ್ಡ ನಗರವಾದ ಮೋಸುಲ್ನಲ್ಲಿ ಐ.ಎಸ್ ಉಗ್ರರು ಕಳೆದ ಬೇಸಿಗೆಯಿಂದಲೂ ತಮ್ಮ ನಿಯಂತ್ರಣ ಸಾಧಿಸಿದ್ದಾರೆ.
ಮೋಸುಲ್ ಮಾರ್ಗದಲ್ಲಿರುವ ಟಿಕ್ರಿತ್, ಐ.ಎಸ್ ಉಗ್ರರ ವಶದಲ್ಲಿರುವ ಅತಿ ದೊಡ್ಡ ನಗರವಾಗಿದೆ. ಭದ್ರತಾ ಪಡೆಗಳು ಟಿಕ್ರಿತ್ನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವಲ್ಲಿ ಇದುವರೆಗೂ ವಿಫಲವಾಗಿದ್ದವು. ಆದರೆ ಬೈಜಿ ಪಟ್ಟಣದಲ್ಲಿ ಅಮೆರಿಕ ಮಿತ್ರ ಪಡೆಗಳು ವಾಯುದಾಳಿ ಮೂಲಕ ಮರಳಿ ವಶಪಡಿಸಿಕೊಂಡ ನಂತರ ಟಿಕ್ರಿತ್ ನಗರವನ್ನೂ ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ.
ಮೋಸುಲ್ ನಗರವನ್ನು ವಶಪಡಿಸಿಕೊಳ್ಳಬೇಕಾದರೆ ಸೇನಾ ಕಾರ್ಯತಂತ್ರಗಳ ದೃಷ್ಟಿಯಿಂದ ಟಿಕ್ರಿತ್ ನಗರವನ್ನು ಮೊದಲು ವಶಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.
ಇರಾಕ್ ಪಡೆಗಳು ಟಿಕ್ರಿತ್ನಲ್ಲಿರುವ ಉಗ್ರರ ಮೇಲೆ ವಿವಿಧ ದಿಕ್ಕುಗಳಿಂದ ಯುದ್ಧ ವಿಮಾನ ಹಾಗೂ ಗುಂಡಿನ ಮೂಲಕ ದಾಳಿ ನಡೆಸುತ್ತಿವೆ. ಇದರಿಂದಾಗಿ ಉಗ್ರರು ನಗರದ ಕೆಲವು ಹೊರಭಾಗಗಳಿಂದ ಕಾಲ್ಕಿತ್ತಿದ್ದಾರೆ. ಅವರ ಅಡಗುದಾಣಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಅಲ್ರಖಿಯಾ ದೂರದರ್ಶನ ತಿಳಿಸಿದೆ.
ಸದ್ದಾಂ ಹುಸೇನ್ ಬೆಂಬಲಿಗರ ಪ್ರಮುಖ ನೆಲೆಯಾಗಿದ್ದ ಅಲ್ಪಸಂಖ್ಯಾತ ಸುನ್ನಿ ಹಾಗೂ ಬಹುಸಂಖ್ಯಾತ ಷಿಯಾ ಮುಸ್ಲಿಮರ ನಡುವೆ ಇರಾಕ್ ಅಕ್ಷರಶಃ ಇಬ್ಭಾಗವಾಗಿದೆ. ಆದರೆ ಪ್ರಸ್ತುತ ಉಗ್ರರ ವಿರುದ್ಧದ ಸೇನಾ ಕಾರ್ಯಾಚರಣೆ ವೇಳೆ ಈ ಎರಡೂ ಪಂಗಡಗಳು ಒಮ್ಮನಸ್ಸಿನಿಂದ ಕೈಜೋಡಿಸಿರುವುದು ಪ್ರಮುಖ ಬೆಳವಣಿಗೆಯಾಗಿದೆ.
ಈ ಕಾರ್ಯಾಚರಣೆ ಆರಂಭವಾದ ಒಂದು ಗಂಟೆಯ ತರುವಾಯ ಇರಾಕ್ ಪ್ರಧಾನಿ, ಷಿಯಾ ಪಂಗಡಕ್ಕೆ ಸೇರಿದ ಹೈದರ್ ಅಲ್ ಅಬಾಡಿ ಅವರು, ‘ಉಗ್ರವಾದಿಗಳನ್ನು ನಿರ್ನಾಮ ಮಾಡುವಂತೆ ಕರೆ ನೀಡಿದರಲ್ಲದೆ, ಇದು ಕೊನೆಯ ಅವಕಾಶ ಎಂದು ಬಣ್ಣಿಸಿದರು. ಅಲ್ಲದೆ, ಕ್ಷಮಾದಾನ ನೀಡುವುದಾಗಿಯೂ ಭರವಸೆ ನೀಡಿದರು.
ದೇಶವನ್ನು ಸುದೀರ್ಘ ಕಾಲ ಆಳಿದ ಸದ್ದಾಂ ಹುಸೇನ್ 2003ರಲ್ಲಿ ಗಡೀಪಾರಾಗಿದ್ದು ನಂತರ ಹತ್ಯೆಗೀಡಾಗಿದ್ದರು. ಇದಾದ ಬಳಿಕ ಅಮೆರಿಕದ ಸೇನಾ ವಶದಲ್ಲಿದ್ದಾಗಲೂ ಟಿಕ್ರಿತ್ನಲ್ಲಿ ಅಮೆರಿಕ ಸೇನಾ ಪಡೆಗಳ ಮೇಲೆ ಪದೇಪದೇ ದಾಳಿ ನಡೆಯುತ್ತಲೇ ಇದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.