ಬೆಂಗಳೂರು: ರಾಜ್ಯ ಸರ್ಕಾರದ ಮಧ್ಯಸ್ಥಿಕೆಯಿಂದಾಗಿ ಟಿವಿ 9 ಹಾಗೂ ನ್ಯೂಸ್ 9 ಸುದ್ದಿ ವಾಹಿನಿಗಳ ಪ್ರಸಾರ ಮಂಗಳವಾರ ಸಂಜೆಯಿಂದ ಮತ್ತೆ ಆರಂಭವಾಗಿದೆ.
ಸೋಮವಾರ ಸಂಜೆ ಆರು ಗಂಟೆಯಿಂದ ಎರಡೂ ಚಾನೆಲ್ಗಳ ಪ್ರಸಾರ ಸ್ಥಗಿತಗೊಳ್ಳುತ್ತಿದ್ದಂತೆ ವಿವಾದ ಉಂಟಾಗಿತ್ತು.
ಬೆಸ್ಕಾಂಗೆ ಸೇರಿದ ವಿದ್ಯುತ್ ಕಂಬಗಳ ಮೇಲೆ ಕೇಬಲ್ ಎಳೆದಿರುವುದಕ್ಕೆ ಶುಲ್ಕ ವಿಧಿಸುವ ಸಂಬಂಧ ಇಂಧನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಕೇಬಲ್ ಆಪರೇಟರ್ಗಳ ನಡುವೆ ಸಭೆ ನಡೆದ ನಂತರ ಈ ಬೆಳವಣಿಗೆ ನಡೆದಿತ್ತು.
‘ಸಚಿವ ಡಿ.ಕೆ. ಶಿವಕುಮಾರ್ ಅವರ ಸೂಚನೆಯ ಮೇರೆಗೆ ಎರಡೂ ಸುದ್ದಿ ವಾಹಿನಿಗಳ ಕೇಬಲ್ ಮೂಲಕ ಪ್ರಸಾರವನ್ನು ಸ್ಧಗಿತಗೊಳಿಸಲಾಗಿದೆ’ ಎಂದು ಟಿವಿ 9 ಕರ್ನಾಟಕ ಪ್ರೈವೇಟ್ ಲಿಮಿಟೆಡ್ ಆರೋಪಿಸಿತ್ತು.
ಬುಧವಾರ ಬೆಳಿಗ್ಗೆ ವಿವಿಧ ಚಾನೆಲ್ ಮತ್ತು ಪತ್ರಿಕೆಗಳ ಮುಖ್ಯಸ್ಥರು ಹಾಗೂ ಸಂಪಾದಕರು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ಪರಿಹರಿಸುವಂತೆ ಮನವಿ ಮಾಡಿದರು.
ಈ ಬಿಕ್ಕಟ್ಟನ್ನು ಪರಿಹರಿಸುವ ಜವಾಬ್ದಾರಿಯನ್ನು ಸಿದ್ದರಾಮಯ್ಯ ಅವರು ಸಚಿವರಾದ ಆರ್. ರೋಷನ್ ಬೇಗ್ ಮತ್ತು ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ವಹಿಸಿದರು.
ಕೇಬಲ್ ಆಪರೇಟರ್ ಸಂಘದ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಸಚಿವರು, ಸಂಜೆ ವೇಳೆಗೆ ಬಿಕ್ಕಟ್ಟನ್ನು ಪರಿಹರಿಸಲು ಸಫಲರಾದರು. ಸಂಜೆ ಐದು ಗಂಟೆ ನಂತರ ಎರಡೂ ಚಾನೆಲ್ಗಳನ್ನು ಪ್ರಸಾರ ಮಾಡಲು ಕೇಬಲ್ ಆಪರೇಟರ್ಗಳು ಸಮ್ಮತಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರೋಷನ್ ಬೇಗ್, ‘ಈ ಪ್ರಕರಣದಲ್ಲಿ ಸರ್ಕಾರದ ಕೈವಾಡ ಇಲ್ಲ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ. ಇದು ಚಾನೆಲ್ ಮತ್ತು ಕೇಬಲ್ ಆಪರೇಟರ್ಗಳ ನಡುವಣ ವಿಚಾರ. ಇದರಲ್ಲಿ ಸರ್ಕಾರದ ಕೈವಾಡ ಇಲ್ಲ’ ಎಂದು ಸ್ಪಷ್ಟಪಡಿಸಿದರು.
ಕೇಬಲ್ ಆಪರೇಟರ್ ಸಂಘದ ಅಧ್ಯಕ್ಷ ಪ್ಯಾಟ್ರಿಕ್ ರಾಜು ಮಾತನಾಡಿ ‘ಚಾನೆಲ್ ಹಾಗೂ ನಮ್ಮ ನಡುವೆ ಭಿನ್ನಾಭಿಪ್ರಾಯಗಳಿರುವುದು ನಿಜ. ಇದನ್ನು ಮಾತುಕತೆಯ ಮೂಲಕ ಬಗೆಹರಿಸುತ್ತೇವೆ. ಇದರಲ್ಲಿ ಡಿ.ಕೆ. ಶಿವಕುಮಾರ್ ಅವರ ಪಾತ್ರ ಏನೂ ಇಲ್ಲ. ಊಹೆ ಮಾಡಿಕೊಂಡು ಚಾನೆಲ್ನಲ್ಲಿ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ’ ಎಂದರು.
ಆರೋಪ ಸುಳ್ಳು: ‘ಟಿವಿ 9 ಪ್ರಸಾರ ಸ್ಥಗಿತಗೊಳಿಸುವಂತೆ ನಾನು ಯಾರಿಗೂ ಸೂಚನೆ ನೀಡಿಲ್ಲ. ಈ ಸುದ್ದಿ ವಾಹಿನಿಯ ಪ್ರಸಾರವನ್ನು ಕೇಬಲ್ ಆಪರೇಟರ್ಗಳು ಸ್ಥಗಿತಗೊಳಿಸಿದ್ದರೆ ಅದಕ್ಕೆ ನಾನಾಗಲಿ, ಸರ್ಕಾರವಾಗಲಿ ಕಾರಣವಲ್ಲ’ ಎಂದು ಡಿ.ಕೆ.ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.