ಮುಜಫ್ಫರ್ನಗರ (ಪಿಟಿಐ): ಮಹಿಳೆ ಮೇಲೆ ಐವರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಮುಜಫ್ಫರ್ನಗರ ಜಿಲ್ಲೆಯ ದುಲ್ಹೆರಾ ಗ್ರಾಮದಲ್ಲಿ ನಡೆದಿದೆ.
ಬುಧವಾರ (ಜೂನ್ 4ರಂದು) ನಡೆದ ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ರನ್ನು ಬೇರೆಡೆ ವರ್ಗ ಮಾಡಲಾಗಿದೆ.
ಠಾಣಾಧಿಕಾರಿ ಸೇರಿದಂತೆ ಆರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಮಹಿಳೆಯು ದುಲ್ಹೆರಾದಿಂದ ಶಹಪುರ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ಘಟನೆ ಜರುಗಿದೆ.
ಮಹಿಳೆಯನ್ನು ಐವರು ಅಪಹರಿಸಿ, ಸ್ಮಶಾನಭೂಮಿಯಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆಕೆಯನ್ನು ಗಮನಿಸಿದ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಸೇರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಬುಧಾನಾ ಸರ್ಕಲ್ ಇನ್ಸ್ಪೆಕ್ಟರ್ ಶೈಲೇಂದರ್ ಲಾಲ್ ಅವರನ್ನು ವರ್ಗ ಮಾಡಲಾಗಿದೆ. ಠಾಣಾಧಿಕಾರಿ ಹಿಂದ್ವೀರ್ ದಿಂಗಾ, ಪೊಲೀಸ್ ಚೌಕಿಯ ಟಿ.ಆರ್. ರಿವಾಲಾ, ಹೆಡ್ ಕಾನ್ಸ್ಟೆಬಲ್ ಅಜಬ್ ಸಿಂಗ್ ಮತ್ತು ಪೇದೆಗಳಾದ ಸರ್ವೇಶ್ ಕುಮಾರ್, ಜಿತೇಂದರ್ ಕುಮಾರ್ ಮತ್ತು ರಾಜೇಂದರ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಎಚ್.ಎನ್. ಸಿಂಗ್ ಶನಿವಾರ ಇಲ್ಲಿ ತಿಳಿಸಿದರು. ಐದು ಜನ ಅಪರಿಚಿತ ಅತ್ಯಾಚಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಬಾವಿಯಲ್ಲಿ ಶವ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ 15 ವರ್ಷದ ಬಾಲಕಿ ಶವ ಕುರ್ಥಾಲ್ ಗ್ರಾಮದ ಬಾವಿಯಲ್ಲಿ ಶುಕ್ರವಾರ ಪತ್ತೆಯಾಗಿದೆ.
ಹೊಲದಲ್ಲಿ ಕೆಲಸ ಮಾಡುತ್ತಿದ್ದ ತಂದೆಗೆ ಮಧ್ಯಾಹ್ನ ಬುತ್ತಿ ತೆಗೆದುಕೊಂಡು ಹೋಗಿದ್ದ ಬಾಲಕಿ ಮತ್ತೆ ಮರಳಿ ಮನೆಗೆ ಬಂದಿರಲಿಲ್ಲ. ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಬಳಿಕ ಆಕೆಯ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.