ಜಿನೀವಾ/ ನವದೆಹಲಿ (ಪಿಟಿಐ): ವಿಶ್ವ ವ್ಯಾಪಾರ ಸಂಘಟನೆಯು (ಡಬ್ಲುಟಿಒ) ಭಾರತದ ಆಹಾರ ದಾಸ್ತಾನು ಪ್ರಮಾಣದ ಮೇಲೆ ಯಾವುದೇ ಮಿತಿ ಹೇರದೆ ‘ಸುಗಮ ವ್ಯಾಪಾರ ಒಪ್ಪಂದ’ಕ್ಕೆ (ಟಿಎಫ್ಎ) ಗುರುವಾರ ರಾತ್ರಿ ಅನುಮೋದನೆ ನೀಡಿದೆ. ಇದರಿಂದ ಕೆಲವು ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದ ಒಪ್ಪಂದಕ್ಕೆ ಅಂಗೀಕಾರ ಸಿಕ್ಕಂತೆ ಆಗಿದೆ.
ಆಹಾರ ದಾಸ್ತಾನು ಪ್ರಮಾಣ ವಿಷಯಕ್ಕೆ ಸಂಬಂಧಿಸಿದಂತೆ ಕಾಯಂ ಪರಿಹಾರ ಹುಡುಕುವ ತನಕ ‘ಶಾಂತಿ ಕರಾರು’ ಮುಂದುವರಿಸಬೇಕು ಎಂಬುದು ಭಾರತದ ಒತ್ತಾಯವಾಗಿತ್ತು. ಈಗ ಈ ಬೇಡಿಕೆಗೆ ಡಬ್ಲುಟಿಒ ಸ್ಪಂದಿಸಿದೆ.
‘ಶಾಂತಿ ಕರಾರಿ’ನ ಮುಂದುವರಿಕೆಯಿಂದಾಗಿ ಯಾವುದೇ ರಾಷ್ಟ್ರವು ಎಷ್ಟೇ ಪ್ರಮಾಣದಲ್ಲಿ ಆಹಾರ ದಾಸ್ತಾನು ಮಾಡಿದರೂ ಬೇರ್್ಯಾವುದೇ ಡಬ್ಲುಟಿಒ ಸದಸ್ಯ ರಾಷ್ಟ್ರವು ಅದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಖಟ್ಲೆ ಹೂಡಲು ಅವಕಾಶ ಇರುವುದಿಲ್ಲ.
ಡಬ್ಲುಟಿಒ ಮಹಾ ನಿರ್ದೇಶಕ ರಾಬರ್ಟೊ ಅಜೆವೆಡೊ ಅವರು ಈ ಬೆಳವಣಿಗೆ ಬಗ್ಗೆ ಸಂತಸ ವ್ಯಕ್ತಪಡಿಸಿ, ‘ಬಹು ಆಯಾಮಗಳ ವಾಣಿಜ್ಯ ಸಂಘಟನೆಗೆ ಇದೊಂದು ಮಹತ್ವದ ಸಂದರ್ಭವಾಗಿದೆ’ ಎಂದಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಗೆ ಮುನ್ನ, ಆಹಾರ ದಾಸ್ತಾನು ಪ್ರಮಾಣಕ್ಕೆ ಸಂಬಂಧಿಸಿದಂತೆ ಎರಡೂ ರಾಷ್ಟ್ರಗಳ ನಡುವೆ ಇದ್ದ ಬಿಕ್ಕಟ್ಟು ಬಗೆಹರಿದಿತ್ತು. ಆಗ ಭಾರತದ ಪ್ರತಿಪಾದನೆಗೆ ಮೊದಲ ಹಂತದ ಗೆಲುವು ಸಿಕ್ಕಿತ್ತು.
‘ಭಾರತಕ್ಕೆ ಗೆಲುವು’
ನವದೆಹಲಿ (ಪಿಟಿಐ): ವಿಶ್ವ ವ್ಯಾಪಾರ ಸಂಘಟನೆಯು (ಡಬ್ಲುಟಿಒ) ಜಿನೀವಾದಲ್ಲಿ ಗುರುವಾರ ರಾತ್ರಿ ಭಾರತದ ಬೇಡಿಕೆ ಒಪ್ಪಿಕೊಂಡು ಟಿಎಫ್ಎ ಅನುಮೋದಿಸಿರುವುದು ಭಾರತಕ್ಕೆ ಸಿಕ್ಕ ಮಹತ್ವದ ಗೆಲುವಾಗಿದೆ ಎಂದು ಸರ್ಕಾರ ಲೋಕಸಭೆಯಲ್ಲಿ ಹೇಳಿದೆ.
ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಸದನದಲ್ಲಿ ಈ ಕುರಿತು ಸ್ವಯಂಪ್ರೇರಿತ ಹೇಳಿಕೆ ನೀಡಿದರು.
ಇದರಿಂದಾಗಿ ಭಾರತವು ಯಾವುದೇ ರಾಜಿ ಮಾಡಿಕೊಳ್ಳದೆ ತನ್ನ ಆಹಾರ ಭದ್ರತಾ ಯೋಜನೆಗಳನ್ನು ಮುಂದುವರಿಸಬಹುದು. ಅಲ್ಲದೇ ರೈತರ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲು ಕೂಡ ಯಾವುದೇ ತೊಡಕಾಗದು ಎಂದರು.