ಚೆನ್ನೈ (ಪಿಟಿಐ): ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಕಳಪೆ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಪಕ್ಷದ ಖಜಾಂಚಿ ಎಂ.ಕೆ. ಸ್ಟಾಲಿನ್, ಕೆಲವೇ ಗಂಟೆಗಳಲ್ಲಿ ವರಿಷ್ಠರ ಸಲಹೆಯಂತೆ ನಿರ್ಧಾರ ಬದಲಿಸಿದ ಘಟನೆ ಭಾನುವಾರ ನಡೆದಿದೆ.
ಆದರೆ ಸ್ಟಾಲಿನ್ ರಾಜೀನಾಮೆ ಹಿಂಪಡೆದಿರುವುದನ್ನು ಅವರ ಹಿರಿಯಣ್ಣ ಮತ್ತು ಪಕ್ಷದ ಉಚ್ಚಾಟಿತ ನಾಯಕ ಎಂ.ಕೆ. ಅಳಗಿರಿ, ಇದೊಂದು ‘ನಾಟಕ’ ಎಂದು ಟೀಕಿಸಿದ್ದಾರೆ. ತಮ್ಮ ಕಿರಿಯ ಪುತ್ರನ ರಾಜೀನಾಮೆ ನಂತರ ಪಕ್ಷದ ಹಿರಿಯರ ಜತೆ ಚರ್ಚಿಸಿದ ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ, ನಿರ್ಧಾರ ಬದಲಿಸಲು ಸ್ಟಾಲಿನ್ ಅವರಿಗೆ ಸೂಚಿಸಿದರು. ಇದರ ಜತೆ ಪಕ್ಷದ ವಿವಿಧ ಮುಖಂಡರು ಮತ್ತು ಕಾರ್ಯಕರ್ತರು ಸ್ಟಾಲಿನ್ ಮನೆಗೆ ಧಾವಿಸಿ ರಾಜೀನಾಮೆ ಹಿಂಪಡೆಯಲು ಒತ್ತಡ ಹಾಕಿದರು ಎಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಪಕ್ಷದ ಹಿರಿಯ ಮುಖಂಡ ದುರೈ ಮುರುಗನ್, ಡಿಎಂಕೆ ಯುವ ಘಟಕದ ಮುಖ್ಯಸ್ಥರೂ ಆದ ಸ್ಟಾಲಿನ್, ಹಿರಿಯರ ಸಲಹೆಯಂತೆ ರಾಜೀನಾಮೆ ವಾಪಸ್ ಪಡೆದಿರುವುದಾಗಿ ತಿಳಿಸಿದರು.
ಈ ಮಧ್ಯೆ, ‘ಸ್ಟಾಲಿನ್ ರಾಜೀನಾಮೆ ತಂದೆಯ ಅಣತಿಯಂತೆ ನಡೆದ ನಾಟಕ’ ಎಂದಿರುವ ಅಳಗಿರಿ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕರುಣಾನಿಧಿ, ‘ಆತ (ಅಳಗಿರಿ) ಪಕ್ಷದಲ್ಲಿದ್ದಾಗಲೂ ಡಿಎಂಕೆ ಎರಡು ಬಾರಿ ಚುನಾವಣೆಯಲ್ಲಿ ಸೋತಿದೆ’ ಎಂದು ಹೇಳಿದ್ದಾರೆ. ‘ಅಳಗಿರಿ ಬಗ್ಗೆ ಹೆಚ್ಚೇನೂ ಹೇಳಲು ಬಯಸುವುದಿಲ್ಲ. ಆತನನ್ನು ಬಹಳ ಹಿಂದೆಯೇ ನಾನು ಮತ್ತು ಪಕ್ಷದವರು ಮರೆತಿದ್ದೇವೆೆ’ ಎಂದೂ ನುಡಿದಿದ್ದಾರೆ.