ಬೆಂಗಳೂರು: ‘ಬೌದ್ಧ ಧರ್ಮದ ಆಚಾರ, ವಿಚಾರ ಹಾಗೂ ಸಂಪ್ರದಾಯಗಳನ್ನು ಪರಿಚಯಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ ಡಿ.1 ರಿಂದ 4 ರವರೆಗೆ ನಗರದ ಜ್ಞಾನಜ್ಯೋತಿ ಸಂಭಾಂಗಣದಲ್ಲಿ ಬೌದ್ಧ ಮಹೋತ್ಸವ ಆಯೋಜಿಸಿದೆ’ ಎಂದು ‘ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಕಲ್ಚರಲ್ ಸ್ಟಡೀಸ್’ ನಿರ್ದೇಶಕ ಗೆಷೆ ಎನ್ ತಾಶಿಬಾಪು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಲಾಮಾ ಚಾಟಿಂಗ್ (ಪಠಣ), ಬೆಣ್ಣೆ ಶಿಲ್ಪಕಲೆ, ಮರಳು ಮಂಡಲ ಕಲೆ, ಮೊನಾಸ್ಟಿಕ್ ನೃತ್ಯ, ದಮ್ಮದೇಸನ, ವಸ್ತುಚಿತ್ರ, ಥಂಕ ಚಿತ್ರಕಲೆ, ಸೋವ ರಿಗ್ಪ, ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎಂದು ವಿವರಿಸಿದರು.
‘ಹಿಮಾಲಯದ ತಿನಿಸುಗಳು, ಬೌದ್ಧ ಕಲಾಕೃತಿಗಳು ಮತ್ತು ಪುಸ್ತಕಗಳ ಮಳಿಗೆಗಳು ಇರಲಿವೆ. ಲಡಾಕ್, ಅರುಣಾಚಲ ಪ್ರದೇಶ, ಟಿಬೆಟ್ ಮತ್ತಿತರ ಪ್ರದೇಶಗಳ ಕಲಾವಿದರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಜನರು ಈ ಉತ್ಸವದ ವಿಶಿಷ್ಟ ಅನುಭವ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.