ಬೆಂಗಳೂರು: ಶಿವಮೊಗ್ಗ ಜಿಲ್ಲೆ ಮತ್ತು ಉತ್ತರ ಕರ್ನಾಟಕದ ಕೆಲವೆಡೆ ಮಂಗಳವಾರ ರಾತ್ರಿ ಮತ್ತು ಬುಧವಾರ ಮಳೆಯಾಗಿದೆ.
ವಿಜಾಪುರ ಜಿಲ್ಲೆಯ ಡೋಣಿ ನದಿ ಜಲಾನಯನ ಪ್ರದೇಶದಲ್ಲಿ ಸುರಿದ ಸತತ ಮಳೆಯಿಂದಾಗಿ ತಾಳಿಕೋಟೆ– ಹಡಗಿನಾಳ ಮಾರ್ಗದಲ್ಲಿರುವ ಡೋಣಿ ಸೇತುವೆ ಬುಧವಾರ ಜಲಾವೃತಗೊಂಡು, ಇಡೀ ದಿನ ವಾಹನ ಸಂಚಾರ ವ್ಯತ್ಯಯಗೊಂಡಿತ್ತು.
ದೊಡ್ಡ ವಾಹನಗಳು ಪ್ರಯಾಸಪಟ್ಟು ಸೇತುವೆ ಮೇಲೆ ತೆರಳಿದವು. ದ್ವಿಚಕ್ರ ವಾಹನಗಳು, ಕಾರು ಮುಂತಾದ ಲಘು ವಾಹನಗಳು, ಶಾಲೆ–ಕಾಲೇಜು ವಿದ್ಯಾರ್ಥಿಗಳು, ರೈತರು ಮಿಣಜಗಿ ಮೂಲಕ ಸುತ್ತುಹಾಕಿ ಪ್ರಯಾಣಿಸಬೇಕಾಯಿತು.
ಸಿಡಿಲಿಗೆ 19 ಕುರಿಗಳ ಬಲಿ:ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಓಬಳಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಹಟ್ಟಿಯಲ್ಲಿದ್ದ 19 ಕುರಿ ಮತ್ತು ಮೇಕೆಗಳು ಮಂಗಳವಾರ ಮಧ್ಯರಾತ್ರಿ ಮೃತಪಟ್ಟಿವೆ. ಹೊನ್ನಳ್ಳಿ ಬೀರಪ್ಪ ಅವರ ಈ ಕುರಿಗಳ ಸಾವಿನಿಂದಾಗಿ ಅಂದಾಜು ರೂ 1 ಲಕ್ಷ ನಷ್ಟ ಆಗಿದೆ ಎನ್ನಲಾಗಿದೆ.
ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬುಧವಾರ ಬೆಳಗಿನ ಜಾವ ಕಣವಿನಾಯಕನಹಳ್ಳಿ ಗ್ರಾಮದ ಹೊಸ ಪ್ಲಾಟ್ ನಲ್ಲಿರುವ 50ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡು, 500ಕ್ಕೂ ಹೆಚ್ಚು ಕೋಳಿಗಳು ನೀರುಪಾಲಾಗಿವೆ. ಬಾಗಲಕೋಟೆ, ಬೆಳಗಾವಿ, ಗದಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿದೆ.
ಲಿಂಗನಮಕ್ಕಿ ಜಲಾಶಯ:ಶಿವಮೊಗ್ಗ ಜಿಲ್ಲೆಯಲ್ಲಿ ಕೆಲ ದಿನಗಳ ಬಿಡುವಿನ ನಂತರ ವಿವಿಧೆಡೆ ಬುಧವಾರ ಸಂಜೆ ಉತ್ತಮ ಮಳೆಯಾಗಿದೆ. ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1813.65 (ಗರಿಷ್ಠ 1,819) ಅಡಿಗೆ ಏರಿಕೆಯಾಗಿದೆ. 13,548 ಕ್ಯೂಸೆಕ್ ಒಳಹರಿವು ಇದ್ದು, 927 ಕ್ಯೂಸೆಕ್ ನೀರು ಹೊರಗೆ ಬಿಡಲಾಗುತ್ತಿದೆ. ಭದ್ರಾ ಜಲಾಶಯ ಗರಿಷ್ಠಮಟ್ಟ (186 ಅಡಿ ) ತಲುಪಿದ್ದು, ಒಳಬರುತ್ತಿರುವ ಎಲ್ಲ ನೀರನ್ನು ಹೊರಗೆ ಬಿಡಲಾಗುತ್ತಿದೆ.
ಪೂರಕ ಮಾಹಿತಿ: ವಿವಿಧ ಬ್ಯೂರೋಗಳಿಂದ.