ನವದೆಹಲಿ (ಪಿಟಿಐ): ಸ್ನೇಹಿತನ ಜತೆ ಮನೆಯಲ್ಲಿ ಮದ್ಯ ಸೇವಿಸಿದ್ದನ್ನು ಆಕ್ಷೇಪಿಸಿದ ಕಾರಣಕ್ಕೆ ತಂದೆಯ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ ವ್ಯಕ್ತಿಗೆ ವಿಚಾರಣಾ ನ್ಯಾಯಾಲಯವು ನೀಡಿರುವ ಏಳು ವರ್ಷಗಳ ಜೈಲು ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ.
ವಯಸ್ಸಾದ ತಂದೆಯನ್ನು ಕಾಳಜಿಪೂರ್ವಕವಾಗಿ ನೋಡಿಕೊಳ್ಳಬೇಕಾದ ಮಗನೇ ಹೊಡೆದು ಗಾಯಗೊಳಿಸಿ ನಂತರ ಕತ್ತು ಹಿಸುಕಿ ಕೊಲೆ ಮಾಡಿರುವ ಅಪರಾಧಿಯ ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಸ್. ಪಿ. ಗರ್ಗ್ ತಿಳಿಸಿದ್ದಾರೆ.
ಹರಿತವಾದ ಆಯುಧದಿಂದ ಹಲ್ಲೆ ಮಾಡಿ ನಂತರ ಕತ್ತು ಹಿಸುಕಿ ಹತ್ಯೆ ಮಾಡಿರುವ ರೋಹಿತ್ ಯಾವ ಕಾರಣಕ್ಕೂ ಕ್ಷಮಾರ್ಹನಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
2011ರ ಫೆಬ್ರುವರಿ 14ರಂದು ರೋಹಿತ್ ತನ್ನ ಸ್ನೇಹಿತನ ಜತೆ ಮನೆಯಲ್ಲಿ ಮದ್ಯ ಸೇವಿಸುತ್ತಿದ್ದಾಗ ತಂದೆ ಆಕ್ಷೇಪಿಸಿದ್ದರು.
ಸ್ನೇಹಿತ ಅಲ್ಲಿಂದ ತೆರಳಿದ ನಂತರ ರೋಹಿತ್ ಅವರು ತಂದೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿದ್ದ ಎಂದು ಆರೋಪ ಮಾಡಲಾಗಿತ್ತು.