ತಿರುವನಂತಪುರಂ(ಪಿಟಿಐ): ತಂಬಾಕು ವಿರೋಧಿ ಕಾನೂನುಗಳ ಪರಿಣಾಮಕಾರಿ ಅನುಷ್ಠಾನ ಸೇರಿದಂತೆ ಹಲವು ಕ್ರಮಗಳಿಗೆ ಕೇರಳ ಪೊಲೀಸರು ಮುಂದಾಗಿದ್ದು, ಶೀಘ್ರವೇ ಕೇರಳ ರಾಜಧಾನಿ ತಂಬಾಕು ಮುಕ್ತ ನಗರವಾಗಿ ಬದಲಾಗಲಿದೆ.
ರಾಜ್ಯ ಸರ್ಕಾರ ಸಿಗರೇಟ್ಗಳ ಮೇಲಿನ ತೆರಿಗೆ ಹೆಚ್ಚಿಸಿರುವ ಬೆನ್ನಲ್ಲೆ ತಂಬಾಕು ವಿರೋಧಿ ಕಾನೂನುಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕಾಗಿ ನಗರದ ಪೊಲೀಸರು ‘ಜನ ಮೈತ್ರಿ’ ಪಡೆಯ ಸಿಬ್ಬಂದಿಯೊಡನೆ ಕೈಜೋಡಿಸಿದ್ದಾರೆ. ‘ಜನ ಮೈತ್ರಿ’ ಕೇರಳ ರಾಜ್ಯ ಪೊಲೀಸ್ಗೆ ಸೇರಿದ ಒಂದು ಪಡೆ.
ಈ ಸಂಬಂಧ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಅವುಗಳ ಆವರಣಗಳನ್ನು ಧೂಮಪಾನ ಮುಕ್ತ ವಲಯಗಳನ್ನಾಗಿ ಘೋಷಿಸಲಾಗಿದ್ದು, ತಂಬಾಕು ಸೇವನೆ ಹಾಗೂ ತಂಬಾಕು ಉತ್ಪನ್ನಗಳ ಮಾರಾಟವನ್ನು ಇತ್ತೀಚೆಗೆ ನಿಷೇಧಿಸಲಾಗಿದೆ.
ಸರ್ಕಾರಿ ಆಡಳಿತಕ್ಕೆ ಒಳಪಟ್ಟ ಇಲ್ಲಿನ ಕಂಪೆನಿ ಹಾಗೂ ಅವುಗಳ ಆವರಣಗಳನ್ನು ಧೂಮಪಾನ ಮುಕ್ತ ವಲಯಗಳೆಂದು ಘೋಷಿಸಲಾಗಿದೆ. ನಿಮಯಗಳ ಉಲ್ಲಂಘನೆಯ ಮೇಲೆ ನಿಗಾ ಇಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎಚ್. ವೆಂಕಟೇಶ್ ತಿಳಿಸಿದ್ದಾರೆ.
ನಿಕೋಟಿನ್ ಅಥವಾ ತಂಬಾಕು ಅಂಶವನ್ನು ಒಳಗೊಂಡ ಪಾನ್ ಮಸಾಲಾ ಉತ್ಪನ್ನಗಳ ಉತ್ಪಾದನೆ, ಮಾರಾಟ ಹಾಗೂ ಸಂಗ್ರಹದ ಮೇಲೆ 2012ರಲ್ಲಿ ಕೇರಳ ನಿಷೇಧಿಸಿದೆ.