214 ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆ ರದ್ದು ಮಾಡುವ ಮೂಲಕ ಸರ್ಕಾರಕ್ಕೆ ಮತ್ತು ಕಾರ್ಪೊರೇಟ್ ವಲಯಕ್ಕೆ ಸುಪ್ರೀಂಕೋರ್ಟ್ ಸರಿಯಾಗಿಯೇ ಚಾಟಿ ಬೀಸಿದೆ. 1993ರಿಂದ 2010ರ ಅವಧಿಯ ಸರ್ಕಾರಗಳು ಕಲ್ಲಿದ್ದಲಿನಂಥ ನೈಸರ್ಗಿಕ ಮತ್ತು ರಾಷ್ಟ್ರೀಯ ಸಂಪತ್ತನ್ನು ಮನಸೋ ಇಚ್ಛೆ ಹಂಚಿಕೆ ಮಾಡಿದ್ದವು.
ಈ ಅವಧಿಯಲ್ಲಿನ ನಾಲ್ಕು ನಿಕ್ಷೇಪಗಳನ್ನು ಬಿಟ್ಟು ಉಳಿದೆಲ್ಲವೂ ಈಗ ರದ್ದಾಗಿವೆ. ಅಲ್ಲದೆ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ 42 ನಿಕ್ಷೇಪಗಳನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರಕ್ಕೆ ಕೋರ್ಟ್ ಅವಕಾಶ ನೀಡಿದೆ. ‘ನಿಕ್ಷೇಪ ಹಂಚಿಕೆಯ ನಂತರ ಈ ಕಂಪೆನಿಗಳು ₨ 2.87 ಲಕ್ಷ ಕೋಟಿ ಬಂಡವಾಳವನ್ನು ಗಣಿಗಾರಿಕೆಯಲ್ಲಿ ತೊಡಗಿಸಿವೆ, ₨ 4 ಲಕ್ಷ ಕೋಟಿ ಬಂಡವಾಳದ ಉದ್ಯಮಗಳು ಇವನ್ನೇ ಅವಲಂಬಿಸಿವೆ’ ಎಂಬ ಸರ್ಕಾರದ ವಾದವನ್ನು ಅದು ಮಾನ್ಯ ಮಾಡಿಲ್ಲ.
ದೇಶದ ಸಂಪತ್ತನ್ನು ಅಕ್ರಮವಾಗಿ ಕೊಳ್ಳೆ ಹೊಡೆದ ಕಂಪೆನಿಗಳು ‘ಮಾಡಿದ ತಪ್ಪಿಗೆ ಶಾಸ್ತಿ ಅನುಭವಿಸಲೇಬೇಕು, ಅವು ಯಾವುದೇ ಅನುಕಂಪಕ್ಕೆ ಅರ್ಹವಲ್ಲ’ ಎಂದು ಕೋರ್ಟ್ ಹೇಳಿರುವುದು ಗಮನಾರ್ಹ. ಏಕೆಂದರೆ ಸಿಎಜಿ ಲೆಕ್ಕಹಾಕಿದ ಪ್ರಕಾರ ಕಲ್ಲಿದ್ದಲು ಅಕ್ರಮದಿಂದ ಬೊಕ್ಕಸಕ್ಕೆ ಆದ ನಷ್ಟದ ಮೊತ್ತವೇ ಸುಮಾರು
₨ 1.86 ಲಕ್ಷ ಕೋಟಿ. ಇದೆಲ್ಲ ಏನೇ ಇದ್ದರೂ, ನ್ಯಾಯಾಲಯದ ತೀರ್ಪು ಇನ್ನೂ ಬೇಗ ಬರಬೇಕಾಗಿತ್ತು. ಆಗ, ಅಕ್ರಮ ವಿಧಾನಗಳ ಮೂಲಕ ಪಡೆದುಕೊಂಡ ಕಲ್ಲಿದ್ದಲು ನಿಕ್ಷೇಪಗಳನ್ನು ಎರಡು ದಶಕಗಳಿಂದ ಲೂಟಿ ಮಾಡುತ್ತಿದ್ದವರಿಗೆ ಮತ್ತಷ್ಟು ಮೊದಲೇ ಕಡಿವಾಣ ಬೀಳುತ್ತಿತ್ತು. ರಾಷ್ಟ್ರೀಯ ಸಂಪತ್ತಿನ ರಕ್ಷಣೆಯೂ ಆಗುತ್ತಿತ್ತು. ತೀರ್ಪಿನ ಇನ್ನೊಂದು ಮಹತ್ವದ ಪರಿಣಾಮ ಎಂದರೆ 172 ಕಲ್ಲಿದ್ದಲು ನಿಕ್ಷೇಪಗಳನ್ನು ಹರಾಜು ಹಾಕಲು ಕೇಂದ್ರಕ್ಕೆ ಅವಕಾಶ ದೊರೆತಿದೆ.
ರದ್ದಾದ ನಿಕ್ಷೇಪಗಳಲ್ಲಿ ಗಣಿಗಾರಿಕೆಯನ್ನು ಕಂಪೆನಿಗಳು ಮುಂದಿನ ಮಾರ್ಚ್ 31ರ ಒಳಗೆ ಸಂಪೂರ್ಣವಾಗಿ ನಿಲ್ಲಿಸಿ ಜಾಗ ಖಾಲಿ ಮಾಡಬೇಕಾಗುತ್ತದೆ. ನಂತರ ಈ ನಿಕ್ಷೇಪಗಳನ್ನೂ ಕೇಂದ್ರ ಸರ್ಕಾರ ಒಂದೋ ಹರಾಜು ಹಾಕಬೇಕು ಅಥವಾ ತನ್ನದೇ ಅಧೀನದ ಕೋಲ್ ಇಂಡಿಯಾಗೆ ಕೊಡಬೇಕು. ಈಗಾಗಲೇ ಗಣಿಗಾರಿಕೆ ನಡೆಸುತ್ತಿರುವ ಕಂಪೆನಿಗಳು ಟನ್ಗೆ ಹೆಚ್ಚುವರಿಯಾಗಿ ₨ 295 ಶುಲ್ಕ ತೆರಬೇಕಾಗುತ್ತದೆ. ನಿಕ್ಷೇಪ ಮಂಜೂರು ಮಾಡಿಕೊಂಡು ಗಣಿಗಾರಿಕೆಯನ್ನೇ ಪ್ರಾರಂಭಿಸದ ಕಂಪೆನಿಗಳು ಬೊಕ್ಕಸಕ್ಕೆ ಆದ ಹಾನಿ ತುಂಬಿಕೊಡಬೇಕಾಗುತ್ತದೆ.
ಈ ಕ್ರಮಗಳೆಲ್ಲವೂ ರಾಷ್ಟ್ರೀಯ ಸಂಪತ್ತಿನ ಲೂಟಿ ತಡೆಯುವ ನ್ಯಾಯಾಲಯದ ಕಳಕಳಿಗೆ ನಿದರ್ಶನ. ಹಂಚಿಕೆ ರದ್ದು ಮಾಡಿದರೆ ಉದ್ಭವಿಸುವ ಸಾಮಾಜಿಕ,- ಆರ್ಥಿಕ ಪರಿಣಾಮಗಳನ್ನು ಎದುರಿಸಲು ಸಜ್ಜಾಗಿರುವುದಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತಳೆದ ದೃಢ ನಿಲುವು ಕೂಡ ಪ್ರಶಂಸನೀಯ. ಆದರೆ ಕಲ್ಲಿದ್ದಲು ಅಭಾವ ಮತ್ತು ಬೆಲೆ ಏರಿಕೆಯಿಂದ ಶಾಖೋತ್ಪನ್ನ ವಿದ್ಯುತ್ ಘಟಕಗಳು ಪೂರೈಸುವ ವಿದ್ಯುತ್ ದರ ಹೆಚ್ಚಬಹುದು. ಗ್ರಾಹಕರ ಮೇಲೆ ಹೊರೆಯಾಗಬಹುದು.
ಅದನ್ನು ನಿಭಾಯಿಸಲು ಈಗಿನಿಂದಲೇ ಎಚ್ಚರ ವಹಿಸಬೇಕು. ಇನ್ನೆಂದೂ ನೈಸರ್ಗಿಕ ಸಂಪತ್ತು ದೋಚಲು ಅವಕಾಶ ಕೊಡಬಾರದು. ಅವುಗಳ ಹಂಚಿಕೆ, ದರ ನಿಗದಿಯಲ್ಲಿ ಪಾರದರ್ಶಕತೆ ತರಬೇಕು. ನಿಯಮಗಳನ್ನು ಬಿಗಿ ಮಾಡಬೇಕು. ಎಲ್ಲಕ್ಕೂ ಮಿಗಿಲಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ವಿವೇಚನೆಯಿಂದ, ಹಿತಮಿತವಾಗಿ ಬಳಸುವ ಸಂಸ್ಕೃತಿ ರೂಢಿಸಿಕೊಳ್ಳಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.