ಬೆಂಗಳೂರು: ಕೆ.ಆರ್.ಪುರ ಸಮೀಪದ ತಂಬುಚೆಟ್ಟಿಪಾಳ್ಯದಲ್ಲಿ ಬುಧವಾರ ಟಿಪ್ಪರ್ ಡಿಕ್ಕಿ ಹೊಡೆದಿದ್ದರಿಂದ ಕುಸಿದ ತಡೆಗೋಡೆಯು ಕಾರ್ಮಿಕರ ಮೇಲೆ ಬಿದ್ದಿದ್ದರಿಂದ ಸ್ಟ್ಯಾನಿ ಮೇರಿ (45) ಎಂಬುವರು ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಟಿಪ್ಪರ್ ವಾಹನವೊಂದು ಕಟ್ಟಡ ನೆಲಸಮ ಮಾಡಿದ್ದ ಅವಶೇಷಗಳನ್ನು ಸುರಿಯಲು ಮಧ್ಯಾಹ್ನ 12.30ರ ಸುಮಾರಿಗೆ ತಂಬುಚೆಟ್ಟಿಪಾಳ್ಯಕ್ಕೆ ಬಂದಿತ್ತು. ಆಗ ಚಾಲಕ ಹಿಮ್ಮುಖವಾಗಿ ಟಿಪ್ಪರ್ ಚಾಲನೆ ಮಾಡಿದ್ದಾನೆ. ಇಳಿಜಾರು ಇದ್ದಿದ್ದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ವಾಹನ, ಉದ್ಯಾನದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.
ಆಗ ತಡೆಗೋಡೆ ಮತ್ತು ಟಿಪ್ಪರ್ನಲ್ಲಿದ್ದ ಅವಶೇಷಗಳು, ಉದ್ಯಾನ ಸ್ವಚ್ಛಗೊಳಿಸುತ್ತಿದ್ದ ಸ್ಟ್ಯಾನಿ ಮೇರಿ, ಸಿದ್ದಮ್ಮ (55) ಹಾಗೂ ಲಾರ್ಡ್ ಮೇರಿ (50) ಅವರ ಮೇಲೆ ಬಿದ್ದವು. ತೆಲೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಸ್ಟ್ಯಾನಿ ಮೇರಿ ಸ್ಥಳದಲ್ಲೇ ಮೃತಪಟ್ಟರು. ಗಾಯಗೊಂಡಿರುವ ಸಿದ್ದಮ್ಮ ಹಾಗೂ ಲಾರ್ಡ್ ಮೇರಿ ಅವರನ್ನು ಸ್ಥಳೀಯರು ಕೂಡಲೇ ಕೆ.ಆರ್.ಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಬಳಿಕ ವೈದ್ಯರ ಸೂಚನೆಯಂತೆ ಲಾರ್ಡ್ ಮೇರಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ಗೆ ವರ್ಗಾಯಿಸಲಾಯಿತು.
ಘಟನೆ ನಂತರ ಚಾಲಕ ಪರಾರಿಯಾಗಿದ್ದಾನೆ. ವಾಹನವನ್ನು ಜಪ್ತಿ ಮಾಡಲಾಗಿದ್ದು, ಅದರ ನೋಂದಣಿ ಸಂಖ್ಯೆ ಆಧರಿಸಿ ಆತನ ಪತ್ತೆ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.