ಕರ್ನಾಟಕ ಸರ್ಕಾರವು ಹಮ್ಮಿಕೊಂಡಿರುವ ಸಮಗ್ರ ತತ್ವಪದ ಸಂಗ್ರಹ ಯೋಜನೆಯ ಪ್ರಸ್ತುತತೆಯನ್ನು, ಅದರ ಹಿಂದಿರುವ ಜೀವಪರ ಕಾಳಜಿಯನ್ನು ನಾಡಿನ ಅನೇಕ ಚಿಂತಕರು ಗುರುತಿಸಿದ್ದಾರೆ. ಸುಮಾರು ಐವತ್ತು ಸಂಪುಟಗಳಷ್ಟು ತತ್ವಪದಗಳ ಸಂಗ್ರಹ ಆಗಬಹುದೆಂಬ ಒಂದು ಅಂದಾಜಿನೊಂದಿಗೆ ಈ ಯೋಜನೆ ಆರಂಭವಾಗಿದೆ.
ತತ್ವಪದಗಳ ತಾತ್ವಿಕತೆ, ರಾಚನಿಕ ಸ್ವರೂಪ, ಕಾಲಘಟ್ಟ, ಭಾಷಾ ರೂಪ ಇತ್ಯಾದಿಗಳ ಬಗೆಗೆ ಅನೇಕ ವಿದ್ವಾಂಸರು ಚರ್ಚಿಸಿದ್ದಾರೆ. ಇದನ್ನು, ತತ್ವಪದಗಳ ಸಂಪಾದನೆ, ಪ್ರಕಟಣೆಗಳನ್ನು ಮಾಡಿರುವ ಅನೇಕ ಸಂಸ್ಥೆಗಳು ಗುರುತಿಸುವ ಪ್ರಯತ್ನ ಮಾಡಿವೆ. ಇಂತಹ ಪ್ರಕಟಣೆಗಳಲ್ಲಿ ಅನೇಕ ತಾತ್ವಿಕ, ಸಾಂಸ್ಕೃತಿಕ ನಿಲುವಿನ ಪ್ರತಿಪಾದನೆಗಳಿವೆ. ತತ್ವಪದಗಳ ಹಲವಾರು ಜನಪ್ರಿಯ ಆವೃತ್ತಿಗಳು, ಅವುಗಳ ತಾತ್ವಿಕತೆಯನ್ನು ಕುರಿತಾದ ಅನೇಕ ಲೇಖನಗಳು ಬಂದಿವೆ. ವಿದ್ವಾಂಸರ ಇಂತಹ ಲೇಖನಗಳನ್ನು ಸಂಗ್ರಹಿಸಿ, ತತ್ವಪದಗಳ ಸಮಗ್ರ ತಾತ್ವಿಕ ಸ್ವರೂಪವನ್ನು ಸವಿಸ್ತಾರವಾಗಿ ನಿರೂಪಿಸುವ ಪುಸ್ತಕವನ್ನು ಸಂಪಾದಿಸಿ ಪ್ರಕಟಿಸುವುದೂ ಈ ಯೋಜನೆಯ ಒಂದು ಭಾಗವಾಗಿದ್ದು, ಅದು ಪ್ರಕ-ಟಣೆಗೆ ಸಿದ್ಧವಾಗುತ್ತಿದೆ. ತತ್ವಪದಗಳು ಕನ್ನಡದ ಬದುಕಿನ ಕೇಂದ್ರ ತಾತ್ವಿಕತೆಯನ್ನು ಮುಂದಿಡುವ ಒಂದು ಆಕರ. ಅದರ ಸಮಗ್ರ ತತ್ವಸ್ವರೂಪವನ್ನು ಸ್ಪಷ್ಟಪಡಿಸಿಕೊಂಡು ಸಂಪಾದಕ ಮಂಡಳಿ ಈ ಕಾರ್ಯದಲ್ಲಿ ತೊಡಗಿದೆ. ತತ್ವಪದಗಳ ತಾತ್ವಿಕತೆಯ ಸ್ಥೂಲ ರೂಪ ಮತ್ತು ಈ ಸಮಗ್ರ ತತ್ವಪದಗಳ ಸಂಗ್ರಹ ಯೋಜನೆಯ ಪ್ರಸ್ತುತತೆಯನ್ನು ಹೀಗೆ ಗುರುತಿಸಬಹುದು.
*ವಿಸ್ತಾರವಾದ ಕನ್ನಡ ಜನಸಮೂಹದ ಬದುಕಿನ ನಿಜ ಚಹರೆಗಳನ್ನು, ಕೇಂದ್ರ ತಾತ್ವಿಕತೆಯನ್ನು ಕಟ್ಟಿಕೊಡುವ ಅಭಿವ್ಯಕ್ತಿಯಾಗಿವೆ.
*ಇವು ಈವರೆಗೆ ದಕ್ಕಿರುವ ಸುಮಾರು ಒಂದು ಸಾವಿರ ವರುಷಗಳ ಕನ್ನಡ ಸಾಹಿತ್ಯ ಪರಂಪರೆಯ ಅತ್ಯಂತ ವಿಸ್ತಾರವಾದ ಭಾಗ.
*ಶೈಕ್ಷಣಿಕ ಸಂಸ್ಥೆಗಳು ತತ್ವಪದಗಳನ್ನು ಹೇಗಾದರೂ ನಡೆಸಿಕೊಂಡಿರಲಿ, ಕನ್ನಡ ನಾಡಿನ ಉದ್ದಗಲಕ್ಕೂ ಇಂದಿಗೂ ಮನೆ ಮನೆಯಂಗಳದಲ್ಲಿ ಜೀವಂತವಾಗಿರುವ ಸಾಹಿತ್ಯಕ ಮತ್ತು ತಾತ್ವಿಕ ಪರಂಪರೆಯೆಂದರೆ ತತ್ವಪದಗಳೇ. ಉತ್ತರ ಮತ್ತು ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಢಾಳಾಗಿಯೂ ಸಮೃದ್ಧವಾಗಿಯೂ ತತ್ವಪದ ಪರಂಪರೆ ಇದೆ. ಕರಾವಳಿ ಭಾಗದಲ್ಲಿ ಇದೆಯೇ ಎಂದು ಶೋಧಿಸಬೇಕಾಗಿದೆ.
*ಈ ಪರಂಪರೆಗೆ ಜಾತಿ, ಧರ್ಮ, ಭಾಷೆಯ ಗಡಿಗಳಿಲ್ಲ. ಕನ್ನಡ ನಾಡಿನ ಎಲ್ಲ ಭಾಷಿಕ ಭಿನ್ನತೆಗಳ ಅಭಿವ್ಯಕ್ತಿಯ ಜೊತೆಗೆ ಕನ್ನಡವು ಒಡನಾಡುವ ಉರ್ದು, ತೆಲುಗು, ಮರಾಠಿ, ತಮಿಳು ಭಾಷೆಯ ತತ್ವಪದಗಳೂ ಭೌಗೋಳಿಕವಾಗಿ ನಾಡಿನ ಒಳಗೂ-ಹೊರಗೂ ಇವೆ.
*ತತ್ವಪದಗಳು ಕೇವಲ ಹಾಡುಗಳಲ್ಲ. ಅದೊಂದು ಜೀವನ ಕ್ರಮ. ವಿಶೇಷವಾಗಿ ಪಾರಲೌಕಿಕ ವ್ಯಾಮೋಹವನ್ನು ತಗ್ಗಿಸಿ ಕುಟುಂಬ ಜೀವನವನ್ನು ಗೌರವಿಸುವ ಮತ್ತು ಸಮೂಹದ ಜೀವನದ ಒಳಿತಿಗಾಗಿ ಬದುಕುವ ಪ್ರಜಾಪ್ರಭುತ್ವ ಪರ ಜೀವನಶೈಲಿ.
*ಇದೊಂದು ಗುರುಪಂಥ. ಗುರು ಮಂಗಲ ಸ್ವರೂಪಿಯಾದವನು. ಅರಿವಿನ ಮೂರ್ತರೂಪ. ವ್ಯಕ್ತಿರೂಪದ ಗುರು ಸಂಕೇತಮಾತ್ರ, ನಿಜವಾಗಿ ಅರಿವೇ ಗುರು.
*ಇದೊಂದು ಸಾಧನಾ ಪರಂಪರೆ. ಹುಟ್ಟಿನಿಂದ ಬರುವುದಲ್ಲ. ಒಮ್ಮೆ ಈ ಸಂಪ್ರದಾಯಕ್ಕೆ ಬಂದರೆ ಜಾತಿ, ಧರ್ಮ, ಲಿಂಗ ಭೇದಗಳೆಲ್ಲ ಕಳಚಿಹಾಕುವ ಇದು ಗುರುಭಕ್ತಿ ಪರಂಪರೆ.
*ಇದು ಭಾರತದ ಅನೇಕ ತಾತ್ವಿಕ ಪ್ರಸ್ಥಾನಗಳ ಸಂಗಮಭೂಮಿ. ಇಲ್ಲಿ ವಚನ, ಶೈವ, ವೈಷ್ಣವ, ಸೂಫಿ, ಶಾಕ್ತ, ಸಿದ್ಧ, ಬೌದ್ಧ, ಅಮನಸ್ಕ, ಅಚಲಿಗ, ಅದ್ವಯ, ಶೂನ್ಯ, ಯೋಗ ಮುಂತಾದ ಅನೇಕ ತಾತ್ವಿಕ ಧಾರೆಗಳಿವೆ.
*ಇದೊಂದು ಜೀವಂತ ಪರಂಪರೆ. ಕರ್ನಾಟಕದ ಉದ್ದಗಲಕ್ಕೂ ಮತ್ತು ಗಡಿಯಾಚೆಗೂ ತತ್ವಪದಗಳು ಕನ್ನಡದ ಬದುಕಿನ ಭಾಗವಾಗಿವೆ. ತತ್ವರಚನೆ ಮತ್ತು ಆಚರಣೆ ಎರಡೂ ನಮ್ಮ ನಡುವೆ ನಡೆಯುತ್ತಿವೆ.
*ತತ್ವಪದಗಳು ಸಂಗೀತ ರಚನೆಗಳು. ಕೆಲವು ತತ್ವಪದಗಳಿಗೆ ನಿರ್ದಿಷ್ಟ ರಾಗ-ತಾಳಗಳ ಸೂಚನೆಯಿರುತ್ತದೆ. ಒಂದೇ ಹಾಡಿಗೆ ಅನೇಕ ಪಠ್ಯಗಳಿರಬಹುದು. ಸಾಮಾನ್ಯವಾಗಿ ತತ್ವಪದಗಳಿಗೆ ಅಂಕಿತವಿರುತ್ತದೆ. ತತ್ವಪದಗಳು ಅವರ ಸಾಧನೆಯ ಹಾದಿಯ ಉಪ- ಉತ್ಪನ್ನಗಳು ಮಾತ್ರ. ಮೊದಲು ನಡೆ ನಂತರ ನುಡಿ. ಇಡೀ ಪರಂಪರೆಗೆ ಸಾಮೂಹಿಕ ಚಹರೆ ಇದೆ. ವೈಯಕ್ತಿಕ ಮುಕ್ತಿ ಈ ಪಂಥಕ್ಕೆ ಮುಖ್ಯವಲ್ಲ. ಕುಟುಂಬ ಸಮೇತ, ಇಂದ್ರಿಯ ಸಮೇತ ಬಾಳುವ ಮನುಷ್ಯನ ಬಿಡುಗಡೆಯ ಮಾರ್ಗಕ್ಕಾಗಿ ಹಂಬಲಿಸುವ ಪಂಥ ಇದು.
*ಇದು ಜ್ಞಾನ ಮತ್ತು ಸಾಧನೆ ಎರಡೂ ಏಕೀಭವಿಸಿದ ಯಾನ. ನಡೆ ಮತ್ತು ನುಡಿ ಒಂದಾಗದ ಜ್ಞಾನ ಜ್ಞಾನವಲ್ಲ. ಸಾಧನೆಗೆ ದೇಹವನ್ನೆ ಬಳಸಿ ಅದರ ಹಂಗಿನಿಂದ ಹೊರಬರುತ್ತಾರೆ. ತತ್ವಪದಗಳ ಅತಿ ಹೆಚ್ಚು ಭಾಗ ಯೋಗದ ಪರಿಭಾಷೆಯಲ್ಲಿ ರೂಪ ತಳೆದಿದೆ.
*ತತ್ವಪದಗಳನ್ನು ಏಕತಾರಿಯ ಜೊತೆ ಹಾಡುತ್ತಾರೆ. ಸಮೂಹದಲ್ಲಿ ಹಳ್ಳಿಗಳ ಹಾಳು ಮಂಟಪಗಳಲ್ಲಿ, ಮಠ, ಗುಡ್ಡಬೆಟ್ಟಗಳಲ್ಲಿ ಹಾಡುವಾಗ ಕಂಜರಿ ಅಥವಾ ದಮ್ಮಡಿ ಅಥವಾ ಇನ್ಯಾವುದಾದರೂ ತಾಳವಾದ್ಯಗಳು ಇರುತ್ತವೆ. ಇವೆರಡು ಇದ್ದರೆ ಸಾಕು ತತ್ವಪದದ ನದಿ ತುಂಬಿ ಹರಿಯುತ್ತದೆ.
*ಇದೊಂದು ರೀತಿಯ ಗುಪ್ತಪಂಥ. ಪ್ರಚಾರದಿಂದ ದೂರವಿರಲು ಬಯಸುವುದರಿಂದ ಅಜ್ಞಾತವಾಗಿ ಉಳಿದಿದೆ.
*ತತ್ವಪದಕಾರರು ಮುಕ್ತಿಯ ಬಾಗಿಲನ್ನು ಎಲ್ಲರಿಗೂ ತೆರೆದಿದ್ದಾರೆ. ಜ್ಞಾನಮಾರ್ಗದಿಂದ ಮಾತ್ರ ಮುಕ್ತಿ ಸಾಧ್ಯ ಎಂಬುದು ಅವರ ನಂಬುಗೆ.
ಶಿಶುನಾಳ ಶರೀಫ, ಕಡಕೋಳ ಮಡಿವಾಳಪ್ಪ, ನಿಜಗುಣ ಶಿವಯೋಗಿ, ಘನಮಠ ಶಿವಯೋಗಿ, ಹಾಗಲವಾಡಿ ಮುದ್ದುವೀರಸ್ವಾಮಿ, ಕೆಸ್ತೂರದೇವ, ಶಂಕರಾನಂದಯೋಗಿ, ಬಕ್ಕಪ್ಪ, ಹಾರಕೂಡ ಚೆನ್ನಬಸವ, ಹೇರೂರ ವಿರುಪನಗೌಡ, ಶಂಕರದೇವ, ಶಂಕರಾನಂದ (ಶಿವರಾಮಶಾಸ್ತ್ರಿ), ಯೆರ್ರಿತಾತ, ಭಂಭಂಸ್ವಾಮಿ, ನೀರಲಕೇರಿ ಬಸವಲಿಂಗಶರಣ, ಹುಚ್ಚೀರಜ್ಜ, ಬಕ್ಕಪ್ಪಯ್ಯ, ಕೊಳ್ಳೂರ ಹುಸನಾಸಾಬ, ಆಲಭೈರಿ, ಖಾಕಿಪೀರ, ಮಹಿಪತಿದಾಸ, ನಾಗಲಿಂಗಯೋಗಿ, ಚೆನ್ನೂರ ಜಲಾಲ್ ಸಾಬ, ಕೈವಾರ ನಾರಾಯಣಪ್ಪ, ಗಟ್ಟಹಳ್ಳಿ ಅಂಜನಪ್ಪ, ಮುಪ್ಪಿನ ಷಡಕ್ಷರಿ, ತೆಲಗಬಾಳ ರೇವಪ್ಪ, ಕಡ್ಲಿವಾಡ ಸಿದ್ದಪ್ಪ, ಖೈನೂರ ಕೃಷ್ಣಪ್ಪ ಮುಂತಾದ ನೂರಾರು ತತ್ವಪದಕಾರರ ಸಾವಿರಾರು ತತ್ವಪದಗಳು ತತ್ವಸಾಧಕರ ತವನಿಧಿಯಾಗಿ ಮೌಖಿಕ ಪರಂಪರೆಯಲ್ಲಿ ಬೆಳೆದು ಬಂದಿವೆ. ಈವರೆಗಿನ ಪರಿಚಿತ ಮತ್ತು ಅಜ್ಞಾತ ತತ್ವಪದಕಾರರ ಸಮಗ್ರ ತತ್ವಪದಗಳನ್ನು ಸಂಗ್ರಹಿಸಿ, ಪ್ರಕಟಿಸುವುದು ಈ ಯೋಜನೆಯ ಉದ್ದೇಶ. ನಾಡಿನ ಉದ್ದಗಲಕ್ಕೂ ಚೆಲ್ಲಿ ಹೋಗಿರುವ ತತ್ವಪದಗಳನ್ನು ಒಟ್ಟುಮಾಡಿ ಕೊಡುವ ಈ ಮಹತ್ವದ ಯೋಜನೆಗೆ ನಾಡಿನ ವಿದ್ವಾಂಸರ, ಸಂಸ್ಥೆಗಳ, ಸಾಧಕರ, ಸಾಹಿತ್ಯ–ತತ್ವ ಪ್ರೀತಿಯ ಎಲ್ಲರ ಸಹಕಾರ ಅತ್ಯಗತ್ಯ. ಅಜ್ಞಾತರಾಗಿಯೇ ಉಳಿದಿರುವ ತತ್ವಪದಕಾರರ ಮಾಹಿತಿಯನ್ನು, ತತ್ವಪದಗಳನ್ನು ಗುರುತಿಸುವುದು ಮುಖ್ಯ. ತತ್ವಪದಗಳು ಪ್ರಮುಖವಾಗಿ ಮೌಖಿಕ ಪರಂಪರೆಯಲ್ಲಿದ್ದರೂ, ಸಾಮಾನ್ಯವಾಗಿ ಸಾಧಕರು ತತ್ವಪದಗಳನ್ನು ಹಸ್ತಪ್ರತಿ ರೂಪದಲ್ಲಿಯೂ ಸಿದ್ಧಪಡಿಸಿಟ್ಟು ಕೊಂಡಿರುತ್ತಾರೆ. ಈ ಮಾಹಿತಿಗಳು ಅಮೂಲ್ಯ. ಆಯಾ ಪ್ರದೇಶಗಳಲ್ಲಿ ನಡೆಯುವ ತತ್ವಜಾತ್ರೆ, ಭಜನಾ ಸಪ್ತಾಹ ಮುಂತಾದುವು ನಡೆಯುವ ಸ್ಥಳಗಳ ಮಾಹಿತಿಗಳೂ ಹೊಸ ಒಳನೋಟ ನೀಡುವಂತಹದ್ದಾಗಿರಬಹುದು. ತತ್ವಪದಗಳ ಹಾಗೂ ತತ್ವಪದಕಾರರ ಬಗೆಗಿನ ಪ್ರಕಟಿತ ಪುಸ್ತಕಗಳು ಅಮೂಲ್ಯ ಆಕರಗಳು. ತತ್ವಪದ ರಚಿಸಿಲ್ಲದ ಆರೂಢ, ಅವಧೂತ, ಅನುಭಾವಿಗಳ ಪಟ್ಟಿ, ತತ್ವಪದಕಾರರ ಹೆಸರಿನಲ್ಲಿ ನಡೆಯುವ ಆರಾಧನೆ, ಜಾತ್ರೆಗಳ ಮಾಹಿತಿ, ತತ್ವಪದ ಪರಂಪರೆ, ತತ್ವಪದಕಾರರು, ಅವಧೂತರು, ಆರೂಢರ ಬಗೆಗೆ ಬಂದಿರುವ ಪುಸ್ತಕ, ಸಂಶೋಧನೆ, ಲೇಖನಗಳ ಪ್ರತಿಗಳೂ ಹೊಸ ಹೊಳಹುಗಳನ್ನು ನೀಡಬಹುದು. ಇಂತಹ ಮಾಹಿತಿಗಳಿದ್ದಲ್ಲಿ ಅವನ್ನು ಪ್ರಧಾನ ಸಂಪಾದಕರು, ಕರ್ನಾಟಕ ಸಮಗ್ರ ತತ್ವಪದ ಸಂಗ್ರಹ ಯೋಜನೆ, ಕನಕದಾಸ ಅಧ್ಯಯನ ಕೇಂದ್ರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-–೫೬೦೦೦೬ ಇಲ್ಲಿಗೆ ಕಳುಹಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.