ಕರ್ನಾಟಕ ಸರ್ಕಾರ ಹಮ್ಮಿಕೊಂಡಿರುವ ಸಮಗ್ರ ತತ್ವಪದ ಸಂಗ್ರಹ ಯೋಜನೆ ಸ್ವಾಗತಾರ್ಹವಾದುದು. ಆದರೆ ಈ ತತ್ವಪದ ಸಂಗ್ರಹದಲ್ಲಿ ಅನೇಕ ತೊಡಕುಗಳಿವೆ. ಕಡಕೋಳ ಮಡಿವಾಳಪ್ಪ ಮತ್ತು ಶಿಶುನಾಳ ಶರೀಫರ ತತ್ವಪದಗಳಲ್ಲಿ ಬಹಳಷ್ಟು ಸಾಮ್ಯತೆಗಳು ಕಂಡುಬಂದಿವೆ.
ಕನ್ನಡ ಸಾಹಿತ್ಯ ಪರಿಷತ್ತಿನ ಕಲಬುರ್ಗಿ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ವೀರಭದ್ರ ಸಿಂಪಿ ಅವರು ಶರೀಫರ ಹೆಸರಿನಲ್ಲಿರುವ ಕೆಲವು ತತ್ವಪದಗಳು ಮಡಿವಾಳಪ್ಪನವರ ತತ್ವಪದಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಚರ್ಚೆ ಕೂಡ ನಡೆದಿದೆ.
ಇಂತಹ ಸಂದರ್ಭದಲ್ಲಿ ತತ್ವಪದಗಳ ಸಂಗ್ರಹ ಕಾರ್ಯ ಬಹಳ ಎಚ್ಚರಿಕೆಯಿಂದ ನಡೆಯಬೇಕಿದೆ. ಈ ಕೆಲಸ ಅಧ್ಯಯನ ಬೇಡುತ್ತದೆ. ತತ್ವಪದಕಾರರ ಕಾರ್ಯಕ್ಷೇತ್ರವಾಗಿದ್ದ ಪ್ರದೇಶಗಳ ವಿದ್ವಾಂಸರು, ಸಂಶೋಧಕರು, ಸಾಹಿತಿಗಳು, ವಿಚಾರವಂತರೊಂದಿಗೆ ಈ ಯೋಜನೆಯ ಸಂಪಾದಕ ಮಂಡಳಿ ಚರ್ಚಿಸಿ, ಚಿಂತನ ಮಂಥನ ನಡೆಸಬೇಕು. ಯಾವುದೇ ರೀತಿಯ ವಿವಾದಗಳಿಗೆ ಆಸ್ಪದ ನೀಡದಂತೆ ಸಂಗ್ರಹ ಕಾರ್ಯ ನೆರವೇರಬೇಕು.