೧೮-–೧೯ನೇ ಶತಮಾನದ ತತ್ವಪದಕಾರರ ಕಾಲವನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ‘ಕತ್ತಲೆಯ ಯುಗ’ ಎಂದು ಗುರುತಿಸಲಾಯಿತು. ಇದಕ್ಕೆ ಕಾರಣ- ವಸಾಹತುಶಾಹಿ ಚರಿತ್ರೆ, ಸಾಹಿತ್ಯ ಚರಿತ್ರೆಗಳ ಮತೀಯ ವಿಭಜಕ ಕಣ್ಣುಪಟ್ಟಿ ಹಾಗೂ ದೇಶಿ ವಿದ್ವಾಂಸರ ವೈದಿಕ-ಪರ ಮತೀಯ ದೃಷ್ಟಿಕೋನ. ಪ್ರಾಚೀನ ಕಾಲದಲ್ಲಿ ಅವೈದಿಕ ಭೌತವಾದಿ ದರ್ಶನಗಳನ್ನು ಅದುಮಿಡಲಾಯಿತು. ಮಧ್ಯ ಯುಗದಲ್ಲಿ ನಾಥ ಮೊದಲಾದ ಅನುಭಾವಿ ಪಂಥಗಳನ್ನು ರಾಕ್ಷಸೀಕರಿಸಲಾಯಿತು. ಅದರ ಮುಂದುವರಿಕೆಯಾಗಿ ತತ್ವಪದಗಳ ಕಾಲವನ್ನು ಕತ್ತಲೆಗೆ ತಳ್ಳಲಾಯಿತು. ಈ ಎಲ್ಲಕ್ಕೂ ಮುಖ್ಯ ಕಾರಣ ಸ್ಥಾಪಿತ ಧರ್ಮಗಳ ವಿರುದ್ಧ ಅವು ಪ್ರಕಟಿಸಿದ ಬಂಡುಕೋರತನ. ಭಾರತದ ಚರಿತ್ರೆಯನ್ನು ಹಾಗೂ ಜನಾಂಗಗಳನ್ನು ಧರ್ಮವನ್ನಾಧರಿಸಿ ವಿಭಾಗಿಸಿದ ವಸಾಹತುಶಾಹಿ ವಿದ್ವಾಂಸರೇ ಕನ್ನಡ ಸಾಹಿತ್ಯ ಚರಿತ್ರೆಯನ್ನು ಧರ್ಮಾಧಾರಿತವಾಗಿಯೂ ವಿಂಗಡಿಸಿದರು. ಹೀಗಾಗಿ ಧರ್ಮಾತೀತವೂ ಧರ್ಮವಿರೋಧಿಯೂ ಆದ ತತ್ವಪದ ಸಾಹಿತ್ಯವನ್ನು ಸಂಪಾದಿಸುವ, ಸಾಹಿತ್ಯ ಪ್ರಕಾರವೆಂದು ಚರ್ಚಿಸುವ ಅಗತ್ಯ ಅವರಿಗೆ ಕಂಡುಬರಲಿಲ್ಲ.
ಭಾರತೀಯ ಸಮಾಜದಲ್ಲಿ ಬೌದ್ಧ, ಜೈನ ಧರ್ಮಗಳು ವೈದಿಕೀಕರಣಕ್ಕೊಳಗಾಗಿ ಶಕ್ತಿ ಕಳೆದುಕೊಂಡಾಗ ಅವುಗಳ ಮೂಲ ಆಶಯಗಳನ್ನು ಮುಂದುವರಿಸುತ್ತ ಭಕ್ತಿ ಚಳವಳಿಗಳು ಉಗಮವಾದವು. ಬೌದ್ಧ ಧರ್ಮದ ಮಹಾಯಾನ ಶಾಖೆಯ ಕವಲು ವಜ್ರಯಾನ ಹಾಗೂ ಕಾಪಾಲಿಕ ಪಂಥಗಳ ಪ್ರೇರಣೆಯಿಂದ ಮಧ್ಯಯುಗದಲ್ಲಿ ನಾಥಪಂಥ ಹುಟ್ಟಿತು. ಅರಬ್ ವ್ಯಾಪಾರಿಗಳ ಜತೆಯಲ್ಲಿಯೇ ಸೂಫಿಪಂಥದ ಒಂದು ಝರಿ ಭಾರತವನ್ನು ಪ್ರವೇಶಿಸಿತ್ತಾದರೂ ಚಿಸ್ತಿಯಾ, ಖಾದ್ರಿಯಾ, ನಕ್ಷಬಂದಿಯಾ ಹಾಗೂ ಇನ್ನಿತರ ಸಿಲ್ಸಿಲಾಗಳು ಮಧ್ಯಕಾಲದಲ್ಲಿ ವ್ಯಾಪಕವಾಗಿ ಪ್ರಸಾರವಾದವು. ಭಾವನಾವಾದಿ ದರ್ಶನಗಳು ಹಾಗೂ ಅವುಗಳನ್ನಾಧರಿಸಿ ರೂಪಿತವಾದ ಧರ್ಮಗಳ ವಿರುದ್ಧ ಬಂಡೆದ್ದ ನಾಥಪಂಥ ಹಾಗೂ ಮುಸ್ಲಿಂ ಧರ್ಮದ ಪುರೋಹಿತಶಾಹಿ ಮತ್ತು ನಿರಂಕುಶ ಪ್ರಭುತ್ವದ ವಿರುದ್ಧ ಬಂಡೆದ್ದ ಸೂಫಿ ಪಂಥಗಳ ಸಾಮರಸ್ಯ ಅನುಸಂಧಾನಗಳಿಂದ ಭಾರತದಾದ್ಯಂತ ಅಸಂಖ್ಯ ಭಕ್ತಿ ಚಳವಳಿಗಳು ಹುಟ್ಟಿಕೊಂಡವು. ಬಂಗಾಳದಲ್ಲಿ ಚೈತನ್ಯ, ಮಹಾರಾಷ್ಟ್ರದಲ್ಲಿ ವಾರಕರಿ, ಮಹಾನುಭಾವ, ದತ್ತ ಪಂಥಗಳು, ಅಸ್ಸಾಂನಲ್ಲಿ ಶಂಕರದೇವ, ಉತ್ತರ ಭಾರತದಲ್ಲಿ ಕಬೀರ, ನಾನಕ ಪಂಥಗಳು ರೂಪ ತಾಳಿದವು. ಆಳುವ ವರ್ಗ ಹಾಗೂ ಶಿಷ್ಟ ಧರ್ಮಗಳ ನೈಚ್ಯಾನುಸಂಧಾನದಿಂದ ಎಲ್ಲ ಬಗೆಯ ಅಸಮಾನತೆ ಹಾಗೂ ಹಿಂಸೆಗೆ ತುತ್ತಾದ ಶೋಷಿತ ಕೆಳವರ್ಗಗಳ ಹಾಗೂ ದುಡಿಯುವ ಸಮುದಾಯಗಳ ಬದುಕಿನಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದವು. ಆಧ್ಯಾತ್ಮಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆಯ ಜಾಗೃತಿಯನ್ನು ಹುಟ್ಟಿಸಿದವು. ಕನ್ನಡದ ತತ್ವಪದ ಸಾಹಿತ್ಯ ಈ ಬಗೆಯ ಆನುಭಾವಿಕ ನೆಲೆಯ ಹೋರಾಟ ಹಾಗೂ ಜಾಗೃತಿಯ ಮುಂದುವರಿಕೆಯಾಗಿದೆ.
ಅನುಭಾವಿ ನೆಲೆಯ ಮುಖ್ಯ ಲಕ್ಷಣ ಧಾರ್ಮಿಕ ಬಂಡಾಯ. ಧರ್ಮವೆನ್ನುವುದು ಕೇವಲ ಆಚರಣೆಯ ವಿಧಾನ ಮಾತ್ರವಾಗಿರದೇ ವರ್ಗ, ಜಾತಿ ಆಧಾರಿತ ಅಸಮಾನ ಸಮಾಜದ ಮುಂದುವರಿಕೆಗೆ ಮಧ್ಯವರ್ತಿಯಾದಾಗ ಅಂಥ ಸಾಂಸ್ಥಿಕ ಧರ್ಮಗಳನ್ನು ಅನುಭಾವ ಪ್ರತಿರೋಧಿಸಿತು. ಸಾಂಸ್ಥಿಕತೆ, ಅರಮನೆ, ಮಠಗಳ ಹಂಗಿನಲ್ಲಿ ಅನುಭಾವ ಅರಳುವುದಿಲ್ಲ. ಹೀಗಾಗಿ ಸೂಫಿ, ಶರಣ, ದಾಸ, ಶಿವಯೋಗಿಗಳು ಧಾರ್ಮಿಕ ಬಂಡಾಯಗಾರರೇ ಆಗಿದ್ದಾರೆ. ತತ್ವಪದಕಾರರು ಕೂಡ ಧಾರ್ಮಿಕ ಬಂಡಾಯಗಾರರು. ಇದರ ಎರಡನೆಯ ಮುಖ್ಯ ಲಕ್ಷಣವೆಂದರೆ ಜಾತಿಗಳಿಗೆ ಅತೀತವಾದ ಬದುಕಿನ ಅನ್ವೇಷಣೆ. ಇದು ಮೂಲತಃ ಗುರುಮಾರ್ಗವಾಗಿದ್ದು, ಗುರುಶಿಷ್ಯ ಸಂಬಂಧದಲ್ಲಿ ಜಾತಿ ಧರ್ಮಗಳ ಕಟ್ಟಳೆಗಳಿರುವುದಿಲ್ಲ. ಗೋವಿಂದಭಟ್ಟ–-ಶಿಶುನಾಳ ಶರೀಫ, ಕಡಕೋಳ ಮಡಿವಾಳಪ್ಪ-–ಚೆನ್ನೂರ ಜಲಾಲ ಸಾಹೇಬ ಹೀಗೆ ಅನೇಕ ಜೋಡಿಗಳನ್ನು ಇಲ್ಲಿ ಗುರುತಿಸಬಹುದು. ಆನುಭಾವಿಕ ನೆಲೆಯ ಇನ್ನೊಂದು ಲಕ್ಷಣ ಯೋಗಮಾರ್ಗ. ದೇಹವೇ ಎಲ್ಲ ಸಾಧನೆಗಳ ತಾಣ. ದೇಹವನ್ನು ತಾಲೀಮಿಗೊಳಪಡಿಸಿ, ಮನುಷ್ಯನೇ ದೇವರಾಗಬಲ್ಲ ಎಂಬ ಚಿಂತನೆಯಿದು. ಸಾವಿರಾರು ವರ್ಷಗಳಿಂದ ಭಾರತದಲ್ಲಿ ಶಿಷ್ಟಧರ್ಮ ಹಾಗೂ ಪ್ರಭುತ್ವದ ಧರ್ಮಗಳ ಭಾಗವಾಗಿ ಬೆಳೆದು ಬಂದ ಭಾವನಾವಾದಿ ದರ್ಶನಗಳನ್ನು ಇದು ನಿರಾಕರಿಸುತ್ತದೆ. ಇಲ್ಲಿ ಯೋಗದ ಸಾಧನೆಯ ತುತ್ತತುದಿಯ ಅವಸ್ಥೆ ತಲುಪಿದ ಸಾಧಕರು ತಾವೇ ಶಿವನಾಗುವ ಕಾರಣ ಬೇರೆ ದೇವರ ಕಲ್ಪನೆ ಇಲ್ಲಿ ಇಲ್ಲ. ಅನುಭಾವ ಮೂಲತಃ ನಾಸ್ತಿಕತೆಯನ್ನು ಪ್ರತಿಪಾದಿಸುತ್ತದೆ. ಯೋಗಸಾಧನೆಯ ಮೂಲಕ ಯಾರಾದರೂ ದೇವರಾಗಬಲ್ಲರು. ನಾಥ ಮತ್ತು ಸೂಫಿ ಪಂಥಗಳೆರಡೂ ಇದೇ ನೆಲೆಯನ್ನು ಒಳಗೊಂಡಿವೆ. ಆನುಭಾವಿಕ ನೆಲೆಯ ಮತ್ತೊಂದು ಲಕ್ಷಣವೆಂದರೆ ಇದು ದುಡಿಯುವ ವರ್ಗ, ಕೆಳವರ್ಗ ಮತ್ತು ಕೆಳಜಾತಿಗಳಿಗೆ ಸಂಬಂಧಿಸಿದ್ದು. ಶಿಷ್ಟಧರ್ಮಗಳ ಪುರೋಹಿತಶಾಹಿಯ ಮೆರವಣಿಗೆಗೆ ಪ್ರತಿಕ್ರಿಯೆಯಾಗಿ ದಲಿತರು, ಕೆಳವರ್ಗದವರು, ಮಹಿಳೆಯರು ಅನುಭಾವ ಚಳವಳಿಯಲ್ಲಿ ಕಾಣಿಸಿಕೊಂಡರು. ಹೀಗಾಗಿ ಇದು ಎಷ್ಟೋ ಬಾರಿ ಭಕ್ತಿಯ ಮುಖವಾಡವನ್ನು ನಿಗೂಢ ಆಚರಣೆಗಳನ್ನು ಒಳಗೊಂಡಿತು. ಅನುಭಾವ, ಲಿಂಗತಾರತಮ್ಯವನ್ನು ನಿರಾಕರಿಸುತ್ತದೆ. ಹೀಗಾಗಿ ಹಲವಾರು ಮಹಿಳಾ ಅನುಭಾವಿಗಳೂ ಕಂಡು ಬರುತ್ತಾರೆ. ಲೈಂಗಿಕತೆಯ ಉನ್ನತೀಕರಣ ಯೋಗಸಾಧನೆಯ ಒಂದು ಮಾರ್ಗವಾಗಿ ನಾಥ, ಶಾಕ್ತ ಮೊದಲಾದ ಪಂಥಗಳಲ್ಲಿ ಆಚರಣೆಗೆ ಬಂದಿತು. ಪುರುಷ ಸಾಧನೆಗೆ ಸಾಧನವಾಗಬೇಕಾದ ಮುಜುಗರದಲ್ಲಿ ಕಾಲಾಂತರದಲ್ಲಿ ಮಹಿಳೆಯರ ಸಂಖ್ಯೆ ಇಲ್ಲಿ ಕಡಿಮೆಯಾದಂತಿದೆ.
ವಸಾಹತುಶಾಹಿ ಹಾಗೂ ಬಂಡವಾಳಶಾಹಿಯ ಪ್ರವೇಶದ ಮೂಲಕ ಕೋಮುವಾದ ಕಣ್ಣು ಬಿಡುವ ಹೊತ್ತಿನಲ್ಲಿ ಸೃಷ್ಟಿಯಾದ ತತ್ವ ಪದಕಾರರು ಹೊಸ ಆರ್ಥಿಕ, ರಾಜಕೀಯ ವ್ಯವಸ್ಥೆಗಳಿಗೆ ಕೆಳಸ್ತರದಿಂದ ಪ್ರತಿಕ್ರಿಯೆ ನೀಡಿದ್ದಾರೆ. ಧರ್ಮಾಧಾರಿತವಾಗಿ ಮನುಷ್ಯರನ್ನು ಒಡೆದು ಆಳುವ ನೀತಿ ಆರಂಭವಾದಂಥ ಕಾಲದಲ್ಲಿ ಇವರು ಹಿಂದೂ–-ಮುಸ್ಲಿಂ ಸಾಮರಸ್ಯವನ್ನು ಪ್ರತಿಪಾದಿಸಿದ್ದಾರೆ. ತತ್ವಪದಗಳ ಸ್ವರೂಪವನ್ನು ತಿಳಿಯುವುದಕ್ಕಾಗಿ ಐದು ತತ್ವಪದಗಳನ್ನು ನೆನಪಿಸಿಕೊಳ್ಳಬಹುದು.
ಶರೀಫರ ‘ಹಾಕೀದಾ ಜನಿವಾರವಾ’ ಎಂಬ ತತ್ವಪದ ಜಾತ್ಯತೀತ ಗುರು–ಶಿಷ್ಯ ಸಂಬಂಧದ ಮೂಲಕ ಸಾಮರಸ್ಯವನ್ನು ಪ್ರತಿಪಾದಿಸುತ್ತದೆ. ಶರೀಫರ ಪದದಲ್ಲಿ ಜನಿವಾರ ತೊಡಿಸಿ, ಮಂತ್ರಬೋಧೆ ಮಾಡುವವ ತಂದೆಯಲ್ಲ, ಗುರು. ಗುರು– ಶಿಷ್ಯ ಸಂಬಂಧ ಜಾತಿ, ಕುಲ, ಗೋತ್ರ, ಭವಗಳಿಗೆ ಅತೀತವಾದದ್ದು. ಕೈವಾರ ತಾತಯ್ಯನವರ ‘ಈ ಊರೊಳಗಿಷ್ಟು ಉತ್ಪಾತವೇನೋ’ ಎಂಬ ಪದವು ಆರ್ಥಿಕತೆ-, ಭಕ್ತಿ-– ಅನುಭಾವಗಳ ಸಂಬಂಧವನ್ನು ಹಿಂಸೆಯ ನೆಲೆಯಲ್ಲಿ ಚರ್ಚಿಸುತ್ತದೆ. ಮೋಟ್ನಳ್ಳಿ ಹಸನ್ಸಾಹೇಬ ‘ಅಲ್ಲಲ್ಲಾ ಇಲ್ಲಿಲ್ಲಾ ಶಿವನಿಲ್ಲಿಲ್ಲ ಶಿವನೆಲ್ಲಿಲ್ಲಾ? ನಿನ್ನ ನೀ ತಿಳಿ ನೀನೇ ಪರಬ್ರಹ್ಮನಲ್ಲಾ?’ ಎಂಬ ತತ್ವಪದದಲ್ಲಿ ಮುಖ್ಯವಾಗಿ ವೈದಿಕ, ವೀರಶೈವ ಹಾಗೂ ಮುಸ್ಲಿಂ ಧರ್ಮಗಳ ಜಡ ಆಚರಣೆಗಳನ್ನು ನಿರಾಕರಿಸುತ್ತಾನೆ. ಇವುಗಳಿಗೆ ಪರ್ಯಾಯವಾಗಿ ಹಸನ್ಸಾಹೇಬ ಯೋಗಮಾರ್ಗವನ್ನು ಸೂಚಿಸಿದ್ದಾನೆ.
ಕಡಕೋಳ ಮಡಿವಾಳಪ್ಪನ ‘ಶರಣಾರ್ಥಿ’ ಎಂಬ ತತ್ವಪದವು ತತ್ವಪದಕಾರರ ಧಾರ್ಮಿಕ ಸೌಹಾರ್ದ ಪರಿಕಲ್ಪನೆಯ ಸ್ವರೂಪವನ್ನು ಹಾಗೂ ಅದರ ಹಿಂದಿರುವ ತಾತ್ವಿಕ -ವಿನ್ಯಾಸಗಳನ್ನು ಖಚಿತವಾಗಿ ನಿರೂಪಿಸುತ್ತದೆ.
‘ಹಲವು ನಾಮರಿಗೆ ಹಲವು ರೂಪರಿಗೆ ಹಲವು ಕ್ರೀಯರಿಗೆ ಶರಣಾರ್ಥಿ ಹಲವು ಜಾಣರಿಗೆ ಹಲವು ಮುಗ್ಧರಿಗೆ ಹಲವು ಛಲರಿಗೆ ಶರಣಾರ್ಥಿ’
ಸ್ಥಾಪಿತ ಧರ್ಮಗಳು ಜಡಗೊಂಡು ಆಂತರಿಕವಾಗಿ ಪುರೋಹಿತಶಾಹಿ ಮತ್ತು ಮೌಢ್ಯಗಳನ್ನು ಬೆಳೆಸಿ ಜನಸಮುದಾಯವನ್ನು ಶೋಷಿಸುತ್ತಿದ್ದವು ಹಾಗೂ ಜಡಗೊಂಡ ಧರ್ಮಗಳು ಪರಸ್ಪರ ದ್ವೇಷದ ಕಾರಣದಿಂದ ಧಾರ್ಮಿಕ ಹಿಂಸೆಗೆ ವೇದಿಕೆಯಾಗುತ್ತಿದ್ದವು. ಈ ಬಗೆಯ ಧಾರ್ಮಿಕ ಹಿಂಸೆಗೆ ಪರ್ಯಾಯವಾಗಿ ಎಲ್ಲ ಧರ್ಮ, ಜಾತಿ, ಜನಸಮುದಾಯಗಳು ಸೌಹಾರ್ದದಿಂದ ಬದುಕು ರೂಪಿಸಿಕೊಳ್ಳಬೇಕೆಂದು ಸಾಮರಸ್ಯದ ತಾತ್ವಿಕತೆಯನ್ನು ಪ್ರತಿಪಾದಿಸಲಾಗಿದೆ.
ಶಿವಲಿಂಗಮ್ಮ ಜತ್ತಿಯವರ ‘ಮಗಾ ಹುಟ್ಟಿತವ್ವ ಎನಗೊಬ್ಬ ಮಗಾ ಹುಟ್ಟಿತವ್ವ’ ಎಂಬ ತತ್ವಪದ ಸ್ತ್ರೀ ಕೂಡ ಅನುಭಾವದಲ್ಲಿ ಪಾಲುದಾರಳಾಗಿ ಧಾರ್ಮಿಕ ಅಸಮಾನತೆಯ ಹಿಂಸೆಯಿಂದ ಮುಕ್ತಿ ಪಡೆದ ಸುಳಿವನ್ನು ಸಂಭ್ರಮದಿಂದ ದಾಖಲಿಸುತ್ತದೆ. ವಚನಕಾರ್ತಿಯರಿಗೆ ಅನುಭವ ಮಂಟಪ ಸಿಕ್ಕಂಥ ಸಂಭ್ರಮವದು. ಅನುಭಾವದ ಐದು ನೆಲೆಗಳನ್ನು ಈ ತತ್ವಪದಗಳು ವಿವರಿಸುತ್ತವೆ. ಸಮಗ್ರ ತತ್ವಪದ ಸಂಪಾದನೆಯ ಚಾರಿತ್ರಿಕ ಕಾರ್ಯದ ಆರಂಭಕ್ಕೆ ಮುನ್ನ ಇನ್ನೂ ಈ ನಿಟ್ಟಿನಲ್ಲಿ ಹೆಚ್ಚಿನ ಚರ್ಚೆ ನಡೆಯಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.