ದಲಿತ ಮುಖ್ಯಮಂತ್ರಿ ಬೇಡಿಕೆಯ ಹಿನ್ನೆಲೆಯಲ್ಲಿ ಮೈಸೂರಿನ ಮಾನಸ ಎಂಬುವವರು ‘ಬೇಡಿಕೆಯೂ ಚಿಂತನೆಯೂ’ ಎಂಬ ಶೀರ್ಷಿಕೆಯ ಪತ್ರ ಬರೆದಿದ್ದಾರೆ (ವಾ.ವಾ. ಮಾರ್ಚ್ ೨). ಆ ಪತ್ರದಲ್ಲಿ ಅವರು ದೇವನೂರ ಮಹಾದೇವರ ‘ನೀವು ಆನೆಯ ಮೇಲೆ ಪಾರ್ಲಿಮೆಂಟಿಗೆ ಹೋಗುವುದನ್ನು ನಾನು ಸ್ವಾಗತಿಸುತ್ತೇನೆ; ಆದರೆ ಪ್ರಜ್ಞಾಹೀನರಾಗಿ ಕತ್ತೆ ಮೇಲೆ ಕೂರಬೇಡಿ’ (‘ಎದೆಗೆ ಬಿದ್ದ ಅಕ್ಷರ’, ಪುಟ ೩೯) ಎಂಬ ಸಾಲುಗಳನ್ನು ಉಲ್ಲೇಖಿಸಿದ್ದಾರೆ. ಆದರೆ ಪ್ರಶ್ನೆಯೇನೆಂದರೆ ದೇವನೂರ ಅವರು ಈ ಮಾತನ್ನು ಆಡಿದ ಸಂದರ್ಭ ಏನು ಮತ್ತು ಯಾಕೆ ಅವರು ಆ ಮಾತನ್ನು ಹೇಳಿದರು ಎಂಬುದನ್ನು ಅವರು ಉಲ್ಲೇಖಿಸದಿರುವುದು.
ವಾಸ್ತವವೆಂದರೆ ಮಹಾದೇವ ಅವರು ೨೦೦೩ರಲ್ಲಿ ಮೈಸೂರಿನಲ್ಲಿ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್) ಏರ್ಪಡಿಸಿದ್ದ ‘ಹೊಂದಾಣಿಕೆ ಸರ್ಕಾರಗಳು– -ಒಂದು ವಿಚಾರಗೋಷ್ಠಿ’ ಎಂಬ ವಿಚಾರ ಸಂಕಿರಣದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದ್ದರು. ಉತ್ತರಪ್ರದೇಶದಲ್ಲಿ ಅಂದು ಬಿಎಸ್ಪಿ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಿದ್ದನ್ನು ಉಲ್ಲೇಖಿಸುತ್ತಾ ‘ಇಲ್ಲಿ ಬಿಎಸ್ಪಿ ವಿದ್ಯಾರ್ಥಿ ಸಮಾವೇಶದಲ್ಲಿ ಸೇರಿರುವವರು ಹೆಚ್ಚಾಗಿ ಎಳೆಯ ಗೆಳೆಯರು. ಆದರ್ಶಗಳನ್ನು ತಲೆತುಂಬಾ ತುಂಬಿಕೊಂಡು ಇರಬೇಕಾದವರು.
ಹೊಂದಾಣಿಕೆ ಅಂದರೆ ಕಿಡಿಕಾರಬೇಕಾದವರು. ವಯಸ್ಸಿಗೆ ಸಹಜವಾಗಿ ಇದು ಕಾಣಬೇಕಿತ್ತು. ಆದರೆ ಅಂತಹವರು ಹೊಂದಾಣಿಕೆ ರಾಜಕೀಯದ ಬಗ್ಗೆ ಇಲ್ಲಿ ತಲೆಕೆಡಿಸಿಕೊಳ್ಳುತ್ತಿರುವುದು ನನ್ನನ್ನು ಕಕ್ಕಾಬಿಕ್ಕಿ ಮಾಡಿದೆ’ ಎನ್ನುತ್ತಾ ‘ನೀವು (ಬಿಎಸ್ಪಿಯವರು) ಆನೆ ಮೇಲೆ (‘ಆನೆ’ ಬಿಎಸ್ಪಿ ಚುನಾವಣಾ ಚಿಹ್ನೆ) ಪಾರ್ಲಿಮೆಂಟಿಗೆ ಹೋಗಿ. ಆದರೆ ಕತ್ತೆ ಮೇಲೆ ಕೂರಬೇಡಿ’ ಎಂದರು.
ದುರಂತವೆಂದರೆ, ದೇವನೂರರು ಅಂದು ಉತ್ತರಪ್ರದೇಶದ ಬಿಎಸ್ಪಿ– ಬಿಜೆಪಿ ಹೊಂದಾಣಿಕೆಗೆ ಆ ಮಾತು ಹೇಳಿದ್ದು. ಅದು ಇಂದಿನ ದಲಿತರ ಅದರಲ್ಲೂ ಕರ್ನಾಟಕದ ದಲಿತರ ‘ದಲಿತ ಸಿ.ಎಂ’ ಬೇಡಿಕೆಗೆ ಹೇಗೆ ತಾಳೆಯಾಗುತ್ತದೆ? ಯಾಕೆ ಇಂಥ ತಪ್ಪು ಉಲ್ಲೇಖ? ಎಂಬುದು ಪ್ರಶ್ನೆ. ಅಲ್ಲದೆ ಇದು ಇಂದಿನ ಕೆಡುಕಿನ ಜಾತಿ ರಾಜಕಾರಣಕ್ಕೆ ಪ್ರಜ್ಞಾವಂತ ಸಾಹಿತಿಯೊಬ್ಬರನ್ನು ಮತ್ತವರ ಸಾಹಿತ್ಯವನ್ನು ಎಳೆದುತಂದಂತೆಯೂ ಕೂಡ ಆಗುತ್ತದಲ್ಲವೆ ಎಂಬುದು.
ಈ ನಿಟ್ಟಿನಲ್ಲಿ ಹೇಳುವುದಾದರೆ ಯಾರನ್ನು ಯಾರೇ ಉಲ್ಲೇಖ ಮಾಡಿದರೂ ಅಂತಹ ಉಲ್ಲೇಖವನ್ನು ಸದರಿ ಸಾಹಿತಿಗಳು ಯಾವ ಸಂದರ್ಭದಲ್ಲಿ ಹೇಳಿದ್ದರು ಎಂಬುದನ್ನು ಪ್ರಸ್ತಾಪಿಸುವುದು ಸೂಕ್ತ. ಇಲ್ಲದಿದ್ದರೆ ಅಂತಹ ಉಲ್ಲೇಖಗಳು ತಪ್ಪು ಸಂದೇಶ ಬಿತ್ತುವ ಅಪಾಯವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.