ಪಾಕಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಬ್ಬರು ಭಾರತೀಯ ಪತ್ರಕರ್ತರನ್ನು ಯಾವುದೇ ಕಾರಣ ನೀಡದೆ ಪಾಕಿಸ್ತಾನ ಸರ್ಕಾರ ಉಚ್ಚಾಟಿಸಿದೆ. ಇಬ್ಬರೂ ಇಸ್ಲಾಮಾಬಾದ್ನಲ್ಲಿ ಕಳೆದ ಒಂಬತ್ತು ತಿಂಗಳುಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಈಗ ಯಾವೊಂದು ಪ್ರಚೋದನೆ ಇಲ್ಲದಿದ್ದರೂ ಏಕಾಏಕಿ ಇದೇ 20ರೊಳಗೆ ರಾಷ್ಟ್ರ ಬಿಟ್ಟು ಹೊರಹೋಗಬೇಕೆಂಬ ಸೂಚನೆಯನ್ನು ಇಬ್ಬರಿಗೂ ನೀಡಲಾಗಿದೆ.
ಭಾರತದಲ್ಲಿ ಅಸ್ತಿತ್ವಕ್ಕೆ ಬರಲಿರುವ ಹೊಸ ಸರ್ಕಾರದ ಜೊತೆ ಬಾಂಧವ್ಯ ಬಲವರ್ಧನೆಗೆ ಶ್ರಮಿಸಬೇಕಾಗಿರುವ ಈ ಹೊತ್ತಲ್ಲಿ ಈ ಕ್ರಮ ತಪ್ಪು ಸಂದೇಶ ರವಾನಿಸುವಂತಹದ್ದು. ಇತ್ತೀಚೆಗೆ 500 ಪಾಕಿಸ್ತಾನಿ ಯಾತ್ರಿಗಳಿಗೆ ವೀಸಾಗಳನ್ನು ನಿರಾಕರಿಸಿದ ಭಾರತದ ಕ್ರಮಕ್ಕೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬಂತಹ ವ್ಯಾಖ್ಯಾನಗಳಿವೆ. ಆದರೆ ಭಾರತದಲ್ಲಿ ಆ ಸಂದರ್ಭದಲ್ಲಿ ಚುನಾವಣೆ ಪ್ರಕ್ರಿಯೆ ಚಾಲನೆಯಲ್ಲಿತ್ತು.
ಹೀಗಾಗಿ ಭದ್ರತೆ ದೃಷ್ಟಿಯಿಂದ ಈ ವೀಸಾಗಳನ್ನು ನಿರಾಕರಿಸುವುದು ಭಾರತಕ್ಕೆ ಅನಿವಾರ್ಯವಾಗಿತ್ತು. ವಾಸ್ತವವಾಗಿ ಪಾಕಿಸ್ತಾನದ ನಾಗರಿಕ ಸರ್ಕಾರ ಹಾಗೂ ಅತ್ಯಂತ ಪ್ರಭಾವಶಾಲಿಯಾಗಿರುವ ಪಾಕ್ ಮಿಲಿಟರಿ ಅಧಿಕಾರಿಗಳ ಮಧ್ಯದ ಕಿತ್ತಾಟ ಈ ಉಚ್ಚಾಟನೆಗೆ ಕಾರಣವಾಗಿರುವ ಸಾಧ್ಯತೆಗಳಿವೆ. ಆದರೆ ಸ್ವತಂತ್ರ ಪತ್ರಕರ್ತರ ಕಾರ್ಯ ನಿರ್ವಹಣೆಗೆ ಅವಕಾಶಗಳನ್ನು ಮೊಟಕುಗೊಳಿಸುವಂತಹ ಈ ಕ್ರಮ ಸರಿಯಲ್ಲ. ಇದು ಹಿನ್ನಡೆಯ ಹೆಜ್ಜೆ ಎಂದು ಭಾರತ ಸರ್ಕಾರ ಟೀಕಿಸಿರುವುದು ಸರಿಯಾಗಿಯೇ ಇದೆ.
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ವಿಶ್ವಾಸ ನಿರ್ಮಾಣ ಮಾಡಲು ಕೈಗೊಳ್ಳಬೇಕಾದ ಅನೇಕ ಕ್ರಮಗಳಲ್ಲಿ (ಸಿಬಿಎಂ) ಮುಕ್ತ ಮಾಹಿತಿಗಳ ಪ್ರಸಾರ ಬಹು ಮುಖ್ಯವಾದದ್ದು. ಹೀಗಾಗಿಯೇ ಹಲವು ದಶಕಗಳ ಹಿಂದೆಯೇ ಆಗಿರುವ ದ್ವಿಪಕ್ಷೀಯ ಒಪ್ಪಂದದ ಪ್ರಕಾರ, ಭಾರತ ಹಾಗೂ ಪಾಕಿಸ್ತಾನ ತಲಾ ಇಬ್ಬರು ಪತ್ರಕರ್ತರನ್ನು ಪರಸ್ಪರರ ದೇಶಗಳಿಗೆ ಕಳಿಸಲು ಅವಕಾಶವಿದೆ. ಈ ಕ್ರಮದಿಂದ ನಿಜಕ್ಕೂ ಒಳ್ಳೆಯ ಪರಿಣಾಮಗಳಾಗಿವೆ.
ಪತ್ರಕರ್ತರ ಸ್ವತಂತ್ರ ಅಭಿಪ್ರಾಯಗಳ ಬರಹಗಳಿಂದಾಗಿ ಉಭಯ ದೇಶಗಳ ಕುರಿತಂತೆ ಹೊಸ ಒಳನೋಟಗಳು ದಕ್ಕಿವೆ. ಆದರೆ, ದೇಶ ತೊರೆಯಬೇಕೆಂದು ಭಾರತೀಯ ಪತ್ರಕರ್ತರಿಗೆ ಆದೇಶಿಸುವ ಮೂಲಕ ಈಗ ಇಂತಹ ವಿಶ್ವಾಸ ಮೂಡಿಸುವ ಕ್ರಮಗಳನ್ನೇ ಕ್ಷುಲ್ಲಕಗೊಳಿಸಿದಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳ ನಡುವೆ ಬಾಂಧವ್ಯ ವೃದ್ಧಿಯ ವಿಚಾರದಲ್ಲಿ ಬದಲಾವಣೆಗಳು ಕಂಡು ಬಂದಿದ್ದವು.
ದ್ವಿಪಕ್ಷೀಯ ಮಾತುಕತೆಗಳ ಧಾಟಿಗಳಲ್ಲೂ ಪ್ರಬುದ್ಧತೆ ವ್ಯಕ್ತವಾಗುತ್ತಿತ್ತು. ಆದರೆ ಈಗ ಭಾರತೀಯ ಪತ್ರಕರ್ತರ ಉಚ್ಚಾಟನೆ ಕ್ರಮದಿಂದ ಇವೆಲ್ಲ ಪ್ರಗತಿಗೂ ಮತ್ತೆ ಹಿನ್ನಡೆ ಆದಂತಾಗಿದೆ. ವೀಸಾ ನೀಡಿಕೆ ವಿಚಾರದ ಭಿನ್ನಾಭಿಪ್ರಾಯಗಳು ಉಭಯ ದೇಶಗಳ ನಡುವಿನ ಶಾಂತಿ ಪ್ರಕ್ರಿಯೆಯನ್ನು ಹಾಳು ಮಾಡಬಾರದು. 2011ರಿಂದ ಯಾವೊಬ್ಬ ಪಾಕಿಸ್ತಾನಿ ಪತ್ರಕರ್ತನೂ ಅವರದೇ ಕಾರಣಗಳಿಗಾಗಿ ಭಾರತದ ನೆಲದಿಂದ ವರದಿಗಾರಿಕೆ ಮಾಡುತ್ತಿಲ್ಲ.
ಕಳೆದ ವರ್ಷ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ವರದಿಗಾರನನ್ನೂ ಪಾಕಿಸ್ತಾನ ಉಚ್ಚಾಟಿಸಿತ್ತು. ಭಾರತದಲ್ಲಿ ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಉಭಯ ದೇಶಗಳ ಮಧ್ಯದ ವಿಶ್ವಾಸ ವರ್ಧಿಸುವ ಕ್ರಮಗಳನ್ನು ಕೈಗೊಳ್ಳುವ ಜವಾಬ್ದಾರಿ ಉಭಯ ದೇಶಗಳಿಗೂ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.