ಚೆನ್ನೈ (ಪಿಟಿಐ): ಶ್ರೀಲಂಕಾ ತಮಿಳನಾಗಿ ಮಲೇಷ್ಯಾದಲ್ಲಿ ನೆಲೆಸಿದ್ದ ಐಎಸ್ಐ ಬೇಹುಗಾರ ಮೊಹಮ್ಮದ್ ಜಹೀರ್ ಹುಸೇನ್, ತನ್ನ ವಿರುದ್ಧದ ಭಯೋತ್ಪಾದನಾ ದಾಳಿಗೆ ಸಂಚು ನಡೆಸಿದ ದೋಷಾರೋಪಗಳೆಲ್ಲವೂ ಸರಿ ಎಂದು ಇಲ್ಲಿನ ಎನ್ಐಎ ಕೋರ್ಟ್ನಲ್ಲಿ ಗುರುವಾರ ತಪ್ಪೊಪ್ಪಿಕೊಂಡಿದ್ದಾನೆ.
ಆದರೆ ಇತರ ಇಬ್ಬರು ಶಂಕಿತರಾದ ಶ್ರೀಲಂಕಾ ಪ್ರಜೆ ಶಿವ ಬಾಲನ್ ಮತ್ತು ಮೊಹಮ್ಮದ್ ಸಲೀಂ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.
ಕೊಲಂಬೊದಲ್ಲಿನ ಪಾಕಿಸ್ತಾನ ಹೈಕಮಿಷನ್ ಅಧಿಕಾರಿಗಳ ಸೂಚನೆ ಮೇರೆಗೆ ಭಯೋತ್ಪಾದನಾ ದಾಳಿಗಳಿಗೆ ಸಂಚು ನಡೆಸಿ, ಭಾರತದ ವಿರುದ್ಧ ಯುದ್ಧ ಸಾರಿರುವುದು ಸೇರಿದಂತೆ ಹಲವು ದೋಷಾರೋಪಗಳನ್ನು ಈ ಮೂವರು ಉಗ್ರರ ಮೇಲೆ ಹೊರಿಸಲಾಗಿದೆ.
ನಿಯೋಜಿತ ಎನ್ಐಎ ಕೋರ್ಟ್ನ ನ್ಯಾಯಾಧೀಶ ಎಂ. ಮೋನಿ ಅವರ ಮುಂದೆ ಈ ಶಂಕಿತರನ್ನು ಹಾಜರುಪಡಿಸಿ, ಐಪಿಸಿ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಗಳಡಿ ದೋಷಾರೋಪ ಹೊರಿಸಲಾಯಿತು.
ಅಮೆರಿಕ ಮತ್ತು ಇಸ್ರೇಲ್ ಕಾನ್ಸಲೇಟ್ಗಳು ಸೇರಿದಂತೆ ಹಲವು ಸ್ಥಳಗಳ ಮೇಲೆ ಭಯೋತ್ಪಾದನಾ ದಾಳಿಗಳನ್ನು ನಡೆಸಲು ಸಂಚು ಹೂಡಿದ್ದಲ್ಲದೆ, ಭಾರತದ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ನಕಲಿ ನೋಟುಗಳನ್ನು ಪ್ರಸಾರ ಮಾಡಿದ ಆರೋಪವೂ ಉಗ್ರರ ಮೇಲಿದೆ.