ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿಯ ಜಿ. ಹೊಸಹಳ್ಳಿ ಪಂಚಾಯಿತಿಗೆ ಸೇರಿದ ಮಡೇನಹಳ್ಳಿ ಗ್ರಾಮದಲ್ಲಿ ಪುರಾತನವಾದ ಎರಡು ಕೆರೆಗಳಿವೆ.
ಆದರೆ ಈ ಎರಡೂ ಕೆರೆಗಳನ್ನು ಸುಮಾರು ಅರ್ಧ ಭಾಗಕ್ಕಿಂತಲೂ ಹೆಚ್ಚು ಒತ್ತುವರಿ ಮಾಡಿಕೊಂಡು ಕೆಲವರು ಅಲ್ಲಿ ಅನೇಕ ವರ್ಷಗಳಿಂದ ಅಕ್ರಮವಾಗಿ ಅಡಿಕೆ, ತೆಂಗು, ಬಾಳೆ ಮುಂತಾದ ವಾಣಿಜ್ಯ ಬೆಳೆಗಳನ್ನು ಬೆಳೆದು ಲಾಭ ಪಡೆಯುತ್ತಿದ್ದಾರೆ.
ಈ ಬಗ್ಗೆ ಸುಮಾರು ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆ ಕೂಡ ನಡೆಯುತ್ತಿದೆ. ಅದು ಇತ್ಯರ್ಥವಾಗದೆ ಕುಂಟುತ್ತಲೂ ಸಾಗಿದೆ.
ಅದು ಏನೇ ಇರಲಿ, ರಾಜ್ಯದ ಎಲ್ಲಾ ಸರ್ಕಾರಿ ಸ್ವತ್ತುಗಳ ಒತ್ತುವರಿಗಳನ್ನು ತೆರವುಗೊಳಿಸಲು ಇತ್ತೀಚೆಗೆ ಹೈಕೋರ್ಟ್ನ ಆದೇಶವೇ ಆಗಿರುವುದು ಇಡೀ ರಾಜ್ಯದ ಜನತೆಗೆ ತಿಳಿದ ವಿಷಯ. ಅದರಂತೆ ತುಮಕೂರು ಜಿಲ್ಲೆಗೆ ಸಂಬಂಧಿಸಿದ ವಿವಿಧ ತಾಲ್ಲೂಕುಗಳಲ್ಲಿ ಆಯಾ ತಹಶೀಲ್ದಾರರ ಹಾಗೂ ಅಧಿಕಾರಿಗಳ ಸಹಭಾಗಿತ್ವದಲ್ಲಿ ಅನೇಕ ಕೆರೆಗಳ ಒತ್ತುವರಿ ತೆರವುಗೊಳಿಸುತ್ತಿರುವುದನ್ನು ಪ್ರತಿನಿತ್ಯ ದಿನಪತ್ರಿಕೆಗಳಲ್ಲಿ ನೋಡುತ್ತಿದ್ದೇವೆ.
ಇಷ್ಟೆಲ್ಲಾ ಆದರೂ ನಮ್ಮ ಗುಬ್ಬಿ ತಾಲ್ಲೂಕು ತಹಶೀಲ್ದಾರರು ಮಾತ್ರ ಇದುವರೆಗೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ತಟಸ್ಥರಾಗಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಮಡೇನಹಳ್ಳಿ ಗ್ರಾಮದ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು.