ಜಯನಗರ ನಾಲ್ಕನೇ ‘ಟಿ’ ಬ್ಲಾಕ್, 26ನೇ ಮುಖ್ಯರಸ್ತೆ ಮತ್ತು 36ನೇ ಕ್ರಾಸ್ ಕೂಡುವ ಎರಡೂ ಬದಿಯಲ್ಲಿ ಪಾದಚಾರಿ ರಸ್ತೆ ಮತ್ತು ಅದಕ್ಕೆ ಹೊಂದಿಕೊಂಡಿರುವ ಸುಮಾರು ಹತ್ತು ಅಡಿ ರಸ್ತೆಯನ್ನು ಈ ಕೆಳಗೆ ತಿಳಿಸಿರುವ ಸಂಸ್ಥೆಗಳು ಆಕ್ರಮಿಸಿ ಸಾರ್ವಜನಿಕರು ಇಲ್ಲಿ ಓಡಾಡಲು ಆಗದಂತಹ ಪರಿಸ್ಥಿತಿ ಉಂಟಾಗಿದೆ.
ಎಸ್.ಎಸ್.ಎಂ.ಆರ್.ವಿ. ಶಿಕ್ಷಣ ಸಂಸ್ಥೆ ತನ್ನ ಮುಂದಿನ ಇಡೀ ಪಾದಚಾರಿ ಮಾರ್ಗವನ್ನು ಸಾಮಾನ್ಯಕ್ಕಿಂತ ಎತ್ತರಿಸಿ ತಮ್ಮಲ್ಲಿಗೆ ಬರುವವರ ವಾಹನಗಳ ಪಾರ್ಕಿಂಗ್ಗೆ ಉಪಯೋಗ ಮಾಡುತ್ತಿದೆ.
ಕೇಕ್ವಾಲಾ ಅಂಗಡಿಯವರು ತಮ್ಮ ಮುಂದಿನ ಪಾದಚಾರಿ ರಸ್ತೆಯನ್ನು ಬಹುಪಾಲು ತಮ್ಮ ಉಪಯೋಗಕ್ಕೆ ಅನುವು ಮಾಡಿರುವುದಲ್ಲದೆ ಅದಕ್ಕೆ ಹೊಂದಿಕೊಂಡಂತೆ ಇರುವ ಸುಮಾರು ಹತ್ತು ಅಡಿ ರಸ್ತೆಯನ್ನು ತಮ್ಮದೆಂಬಂತೆ ಅಡ್ಡಪಟ್ಟಿ ಹಾಕಿದ್ದಾರೆ.
ಇವರಿಬ್ಬರಿಗೆ ಹೊಸ ಸೇರ್ಪಡೆ ಅದಕ್ಕೆ ಹೊಂದಿಕೊಂಡಿರುವ ಹೊಸ ಹೋಟೆಲ್ ‘ತಾಜಾ ತಿಂಡಿ’. ಇವರಂತೂ ತಾಜಾ ತೊಂದರೆ ನೀಡುವುದಕ್ಕಾಗಿಯೇ ಬಂದಂತಿದೆ. ಇಲ್ಲಿ ಮಾರಾಟ ಮಾಡುವ ತಿಂಡಿ ತಿನಿಸುಗಳಿಗೆ ಪಾದಚಾರಿ ಮಾರ್ಗದವರೇ ಗ್ರಾಹಕರು. ಅವರ ವಾಹನಗಳಿಗಾಗಿ ಮುಂದಿನ ಸ್ವಲ್ಪ ಭಾಗ ರಸ್ತೆಯನ್ನು ತಮ್ಮ ಖಾಯಂ ಸ್ಥಳವಾಗಿ ಮಾರ್ಪಡಿಸಿಕೊಂಡಿದ್ದಾರೆ. ಇದರ ಹತ್ತಿರ ಬಿ.ಎಂ.ಟಿ.ಸಿ. ಬಸ್ ನಿಲ್ದಾಣವಿದ್ದು, ಇಲ್ಲಿ ಪ್ರಯಾಣಿಕರು ಬಸ್ ಹತ್ತಿ ಇಳಿಸಲು ಅಸಾಧ್ಯವೆನಿಸುವ ಪರಿಸ್ಥಿತಿ ಇದೆ.
ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಬಿಎಂಟಿಸಿ ಅಧಿಕಾರಿಗಳು ಈ ಪಾದಚಾರಿ ಮಾರ್ಗಕ್ಕೆ ಬಿಡುಗಡೆಯ ಭಾಗ್ಯ ಕೊಟ್ಟು ಸಾರ್ವಜನಿಕರಿಗೆ ಇಲ್ಲಿ ಓಡಾಡುವ ಅನುಕೂಲ ಮಾಡಿಕೊಡಲಿ.