ಬೆಂಗಳೂರು: ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ದೇವರಜೀವನ ಹಳ್ಳಿಯ ಸರ್ಕಾರಿ ಉರ್ದು ಶಾಲೆಯಲ್ಲಿ ಬಿಸಿಯೂಟವನ್ನು ಪೋಷಕರ ಒತ್ತಾಯದ ಮೇರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಇಸ್ಕಾನ್ ಸಂಸ್ಥೆಯು ಎಂದಿನಂತೆ ಶಾಲೆಗೆ ಮಧ್ಯಾಹ್ನದ ಬಿಸಿಯೂಟವನ್ನು ಸೋಮವಾರ ಪೂರೈಕೆ ಮಾಡಿದ್ದು, ಅದನ್ನು ವಾಪಸ್ ಕಳುಹಿಸಲಾಗಿದೆ. ಶುಕ್ರವಾರ ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ. ಮತ್ತೆ ಅದೇ ಸಂಸ್ಥೆಯ ಊಟ ಮಕ್ಕಳಿಗೆ ನೀಡಬಾರದು ಎಂದು ಪೋಷಕರು ಪ್ರತಿಭಟನೆ ನಡೆಸಿ ಬಿಸಿಯೂಟ ಪೂರೈಕೆಗೆ ಅಡ್ಡಿಪಡಿಸಿದರು.
ಪೋಷಕರ ವಿರೋಧದಿಂದಾಗಿ ಬಿಸಿಯೂಟವನ್ನು ಶಾಲಾ ಮುಖ್ಯಸ್ಥರು ವಾಪಸ್ ಕಳುಹಿಸಿದರು. ಸದ್ಯಕ್ಕೆ ಬಿಸಿಯೂಟ ಬೇಡ ಎಂದು ಶಾಲೆ ಮುಖ್ಯಸ್ಥರಾದ ಜರೀನಾ ಅವರು ಇಸ್ಕಾನ್ ಆಡಳಿತ ಮಂಡಳಿಗೆ ಸೂಚನೆ ನೀಡಿದರು.
ಈ ಮಧ್ಯೆ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್ ಮೊಹಿಸಿನ್ ಸೋಮವಾರ ಶಾಲೆಗೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಅವರು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಪರೀಕ್ಷಿಸಿದರು.