ಚನ್ನಪಟ್ಟಣ: ತಾಲ್ಲೂಕು ಪಂಚಾಯಿತಿಯ ನೂತನ ಅಧ್ಯಕ್ಷ್ಷರಾಗಿ ರಮ್ಯರವಿ, ಉಪಾಧ್ಯಕ್ಷರಾಗಿ ಪವಿತ್ರಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಮ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಪವಿತ್ರ ಒಬ್ಬೊಬ್ಬರೆ ನಾಮಪತ್ರ ಸಲ್ಲಿಸಿದ್ದ ಕಾರಣ ಅವಿರೋಧ ಆಯ್ಕೆ ನಡೆಯಿತು.
ಈ ಹಿಂದಿನ ಅಧ್ಯಕ್ಷ-ಉಪಾಧ್ಯಕ್ಷರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಗಳಿಗೆ ಚುನಾವಣೆ ನಡೆಯಿತು. ಮುಂದಿನ ಹತ್ತು ತಿಂಗಳ ಅವಧಿಗೆ ಈ ಇಬ್ಬರು ಅಧ್ಯಕ್ಷ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ರಮ್ಯರವಿ ಮಳೂರುಪಟ್ಟಣ ಕ್ಷೇತ್ರದಿಂದ, ಪವಿತ್ರಾ ಹೊಂಗನೂರು ಕ್ಷೇತ್ರದಿಂದ ಆಯ್ಕೆಯಾಗಿದ್ದವರು. ಚುನಾವಣಾಧಿಕಾರಿಯಾಗಿ ರಾಜೇಂದ್ರಪ್ರಸಾದ್ ಕಾರ್ಯನಿರ್ವಹಸಿದರು.
ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ: ನೂತನ ತಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ರಮ್ಯರವಿ, ತಾಲ್ಲೂಕಿನಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಪಕ್ಷಾತೀತವಾಗಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಅಭಿನಂದನೆ: ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರನ್ನು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಜಿ.ಪಂ.ಸದಸ್ಯೆ ಯು.ಪಿ.ನಾಗೇಶ್ವರಿ, ತಾ.ಪಂ.ಸದಸ್ಯರಾದ ಮಾರೇಗೌಡ, ಗುರುಕುಮಾರ್, ಸವಿತಾ, ಜಯಮ್ಮ, ಪುಟ್ಟಮ್ಮ, ಲಕ್ಕಮ್ಮ, ಪವಿತ್ರ, ಲಕ್ಷ್ಮಮ್ಮ, ಭಾನುಪ್ರಸಾದ್, ಹನುಮಂತಯ್ಯ, ವೆಂಕಟೇಶ್, ಮುಖಂಡರಾದ ಸಿಂ.ಲಿಂ.ನಾಗರಾಜು, ಅರಳಾಳುಸಂದ್ರ ಶಿವಪ್ಪ, ತಮ್ಮಣ್ಣ ಅಭಿನಂದಿಸಿದರು