ಮಧುಗಿರಿ: ತಾಲ್ಲೂಕಿನ ತಾಯಿಗೊಂಡನಹಳ್ಳಿ ಗ್ರಾಮದಲ್ಲಿ ನೀರಿಗಾಗಿ ಗ್ರಾಮಸ್ಥರು ಕಳೆದ ಒಂದು ತಿಂಗಳಿನಿಂದ ಪರದಾಡುತ್ತಿದ್ದಾರೆ.
ಮಹಿಳೆಯರು ನೀರಿಗಾಗಿ ಕೊಳಾಯಿಗಳ ಮುಂದೆ ಬಿಂದಿಗೆ ಮತ್ತು ಪಾತ್ರೆಗಳನ್ನು ಸರದಿ ಸಾಲಿನಲ್ಲಿಟ್ಟು ಕಾಯುವುದು ನಿತ್ಯದ ಕಾಯಕವಾಗಿದೆ. ಕೊಳಾಯಿಗಳಲ್ಲಿ ನೀರು ಬಂದರೆ ಮಾತ್ರ ಇವರ ಬದುಕಿಗೆ ನೆಮ್ಮದಿ. ಇಲ್ಲವಾದರೆ ಕೂಲಿ ಕೆಲಸಕ್ಕೆ ಹೋಗಲೂ ಸಾಧ್ಯವಾಗದು ಎಂದು ಗ್ರಾಮಸ್ಥರಾದ ಲಕ್ಷ್ಮಮ್ಮ ದೂರಿದರು.
‘ಜಾನುವಾರುಗಳಿಗೆ ನೀರು ಕುಡಿಸಲು ಬಹುದೂರ ಕರೆದೊಯ್ಯಬೇಕಾಗಿದೆ. ಜಾನುವಾರು ನೀರು ತೊಟ್ಟಿ ನಿರ್ಮಿಸಬೇಕು’ ಎಂದು ಹೈನುಗಾರಿಕೆಯಿಂದ ಬದುಕು ಸಾಗಿಸುವ ಕೋಟಪ್ಪ ಹೇಳಿದರು.
ಗ್ರಾಮದಲ್ಲಿ ನೀರಿನ ಸಿಸ್ಟನ್ಗಳಿವೆ. ಆದರೆ ಬೋರ್ವೆಲ್ನಲ್ಲಿ ನೀರಿನ ಇಳುವರಿ ಕಡಿಮೆ ಇರುವ ಕಾರಣ ನೀರು ಸಿಸ್ಟನ್ ತಲುಪುತ್ತಿಲ್ಲ. ಅಧಿಕಾರಿಗಳಿಗೆ ಈ ವಿಷಯ ತಿಳಿಸಿದರೂ ಪ್ರಯೋಜನವಾಗಿಲ್ಲ. ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿ– ಪರಿಹರಿಸುವ ವ್ಯವಧಾನ ಯಾರಿಗೂ ಇಲ್ಲ’ ಎಂದು ಗ್ರಾಮಸ್ಥರಾದ ಶಿವಕುಮಾರ್, ನಾಗೇಂದ್ರ, ನಂಜಮ್ಮ, ಲಕ್ಷ್ಮಮ್ಮ, ಭಾಗ್ಯಮ್ಮ, ಸಿದ್ದಮ್ಮ, ಕರಿಯಮ್ಮ, ಪುಟ್ಟಗಂಗಮ್ಮ, ಜಯಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮತ್ತೊಂದು ಕೊಳವೆಬಾವಿ: ತಾಯಿಗೊಂಡನಹಳ್ಳಿ ಗ್ರಾಮದ ಸಮೀಪ 6 ತಿಂಗಳ ಹಿಂದೆ 2 ಕೊಳವೆಬಾವಿ ಕೊರೆಸಲಾಗಿತ್ತು. ಸಿಸ್ಟನ್ಗಳಿಗೆ ಅಳವಡಿಸಿರುವ ಪೈಪ್ಗಳು ಹಾಳಾಗಿವೆ. ಅದನ್ನು ಸರಿಪಡಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಸಮಸ್ಯೆ ಮುಂದುವರಿದರೆ ಹೆಚ್ಚುವರಿ ಕೊಳವೆಬಾವಿ ಕೊರೆಸಿ, ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪಂ. ಸದಸ್ಯೆ ಸುಮನಾ ಪ್ರತಿಕ್ರಿಯಿಸಿದರು.