ಶಿಕ್ಷಣ ಪದ್ಧತಿಯಲ್ಲಿ ಅಳವಡಿಸಿರುವ ಸಿ.ಸಿ.ಇ. (ನಿರಂತರ ಮತ್ತು ಸಮಗ್ರ ಮೌಲ್ಯಮಾಪನ) ಏನು ದೇವರೇ? ಶಿಕ್ಷಣ ಇಲಾಖೆ ಅದನ್ಯಾಕೆ ಆರಾಧಿಸುತ್ತಿದೆ. ನಲಿ– ಕಲಿ ದೇಶಿ ಶಿಕ್ಷಣ ಪದ್ಧತಿಯೇ ಅಥವಾ ವಿದೇಶಿ ಶಿಕ್ಷಣ ಪದ್ಧತಿಯೇ? ಈ ನಲಿ – ಕಲಿ ಇಟ್ಟುಕೊಂಡು ತರಗತಿಯಲ್ಲಿ ಶಿಕ್ಷಕರು ಕಬಡ್ಡಿ ಆಡಬೇಕೇ?
ಶಿಕ್ಷಕ ಸಂಘಟನೆಗಳು ನಲಿ–ಕಲಿ ಪದ್ಧತಿಯನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿದರೂ ಸರ್ಕಾರ ಅದೇ ಪದ್ಧತಿಯನ್ನು ಯಾಕೆ ಅನುಸರಿಸುತ್ತಿದೆ?
ಬರಗೂರು ರಾಮಚಂದ್ರಪ್ಪ ಸಮಿತಿಯು ಸೆಮಿಸ್ಟರ್ ಪದ್ಧತಿ ತೆಗೆದು ವಾರ್ಷಿಕ ಪರೀಕ್ಷೆಗಳಷ್ಟೆ ನಡೆಸಿದರೂ ಸಾಕು ಎಂದರೂ ಸರ್ಕಾರ,
ಇಲಾಖಾ ಅಧಿಕಾರಿಗಳು ಯಾಕೆ ಮೌನ ವಹಿಸಿದ್ದಾರೆ. ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಶಿಕ್ಷಣ ಇಲಾಖೆ ಗಂಡಾಂತರ ಸ್ಥಿತಿಯಲ್ಲಿದೆ. ಇದನ್ನು ರಕ್ಷಿಸುವವರು, ಕಾಪಾಡುವವವರು ಯಾರು?
ಶಿಕ್ಷಕರು ಪಾಠ ಯೋಜನೆ, ಕ್ರಿಯಾ ಯೋಜನೆ ಬರೆಯುತ್ತಾ ವ್ಯರ್ಥವಾಗಿ ಕಾಲ ಕಳೆಯಬೇಕೇ? ಕಾನ್ವೆಂಟ್ ಮಕ್ಕಳಿಗೊಂದು ಪದ್ಧತಿ, ಕನ್ನಡ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಒಂದು ಪದ್ಧತಿ. ಸರ್ಕಾರ ಅನುಸರಿಸುತ್ತಿರುವ ಈ ದ್ವಿಮುಖ ನೀತಿ, ತಾರತಮ್ಯ ನೀತಿ ತೊಲಗಲಿ.