ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಏಕರೂಪ ಟಿಕೆಟ್ ವ್ಯವಸ್ಥೆ ಹೊಂದಿಲ್ಲ. ಇದಕ್ಕೆ ಜುಲೈ 6ರಂದು ನಾನು ಪ್ರಯಾಣಿಸಿದ ಬಸ್ಗಳಲ್ಲಿನ ದರ ವ್ಯತ್ಯಾಸವೇ ಸಾಕ್ಷಿ.
ಅಂದು ಬೆಳಿಗ್ಗೆ 6 ಗಂಟೆಗೆ ದಾವಣಗೆರೆಯಿಂದ ಬೆಂಗಳೂರಿಗೆ ಹೊರಟೆ. ನಿರ್ವಾಹಕರು ‘ವೈಭವ್’ ಬಸ್ಸಿನಲ್ಲಿ ಮಾಮೂಲಿ ಟಿಕೆಟ್ ದರ ₨ 316 ಎಂದೂ, ಆಷಾಢ ಪ್ರಯುಕ್ತ ಸೋಮವಾರದಿಂದ ಗುರುವಾರದವರೆಗೆ ಶೇಕಡ 10 ರಿಯಾಯಿತಿ ಇದೆ ಎಂದು ಹೇಳಿ ₨ 279ನ್ನು ಮಾತ್ರ ತೆಗೆದುಕೊಂಡರು. (ಈ ಬಸ್ಸು ದಾವಣಗೆರೆ ಡಿಪೊಗೆ ಸೇರಿದ್ದು).
ಆದರೆ ಅದೇ ದಿನ ರಾತ್ರಿ ಶ್ರೀನಿವಾಸಪುರ ಡಿಪೊಗೆ (ಕೋಲಾರ ಜಿಲ್ಲೆ) ಸೇರಿದ ‘ವೈಭವ್’ ಬಸ್ಸಿನಲ್ಲಿ 9.45ಕ್ಕೆ ಬೆಂಗಳೂರಿನಿಂದ ವಾಪಸಾದೆ. ಆದರೆ ಆ ಬಸ್ಸಿನಲ್ಲಿ ಪೂರ್ತಿ ದರ ಎಂದು ₨ 318ನ್ನು ಪಡೆದುಕೊಂಡರು. ಹೀಗೇಕೆ ಎಂದು ಕೇಳಿದ್ದಕ್ಕೆ ನಮ್ಮ ಡಿಪೊದಲ್ಲಿ ಯಾವುದೇ ದರ ವ್ಯತ್ಯಾಸ ಆಗಿಲ್ಲ ಎಂದರು.
ಒಂದೇ ರಾಜ್ಯಕ್ಕೆ ಸೇರಿದ ಸರ್ಕಾರಿ ಬಸ್ಸಿನಲ್ಲಿ ಹೀಗೇಕೆ ವ್ಯತ್ಯಾಸ? ಇದು ಇಷ್ಟಕ್ಕೇ ನಿಂತಿಲ್ಲ. ಆಷಾಢದಲ್ಲಿ ರಾಜಹಂಸ, ವೈಭವ್, ಐರಾವತಗಳಿಗೆ ರಿಯಾಯಿತಿ ನೀಡುವ ಕೆಎಸ್ಆರ್ಟಿಸಿ, ಅದೇ ಜನಸಾಮಾನ್ಯರ ಎಕ್್ಸಪ್ರೆಸ್ ಬಸ್ಸುಗಳಿಗೆ ಯಾವ ರಿಯಾಯಿತಿಯನ್ನೂ ನೀಡುವುದಿಲ್ಲ. ಇಂತಹ ತಾರತಮ್ಯ ಏಕೆ?