ಮುಂಬೈ (ಪಿಟಿಐ): ಕಳೆದೆರಡು ವಾರಗಳಿಂದ ಹಗರಣಗಳಿಂದ ಬಸವಳಿದಿರುವ ಬಿಜೆಪಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಪಂಕಜಾ ಮುಂಡೆ ಅವರ ಬೆನಲ್ಲೆ ಮತ್ತೊಬ್ಬ ಸಚಿವರಾದ ವಿನೋದ್ ತಾವಡೆ ಅವರ ಕೊರಳಿಗೆ 191 ಕೋಟಿ ರೂಪಾಯಿ ಮೊತ್ತ ಹಗರಣ ಸುತ್ತಿಕೊಂಡಿದೆ.
ಇ–ಟೆಂಡರ್ ಕರೆಯದೇ 191 ಕೋಟಿ ರೂಪಾಯಿ ಮೊತ್ತದ ಗುತ್ತಿಗೆಯನ್ನು ತಾವಡೆ ಅವರ ಶಿಕ್ಷಣ ಇಲಾಖೆ ನೀಡಿದೆ ಎಂಬುದು ಸದ್ಯದ ಆರೋಪ.
ತಾವಡೆ ಸ್ಪಷ್ಟನೆ: ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ತಾವಡೆ, ‘ಯಾವುದೇ ಗುತ್ತಿಗೆದಾರರಿಗೆ ಇನ್ನೂ ಒಂದು ಬಿಡಿಗಾಸೂ ಕೊಟ್ಟಿಲ್ಲ. ಹಣಕಾಸು ಇಲಾಖೆ ಆಕ್ಷೇಪ ಎತ್ತಿದ ಬೆನ್ನಲ್ಲೆ ನಾವು ತಕ್ಷಣವೇ ಬೇಡಿಕೆ ಆದೇಶವನ್ನು ಸ್ಥಗಿತಗೊಳಿಸಿದ್ದೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಏನಿದು ಹಗರಣ?: ಮಹಾರಾಷ್ಟ್ರ ರಾಜ್ಯದಲ್ಲಿ 62,105 ಜಿಲ್ಲಾ ಪರಿಷತ್ ಶಾಲೆಗಳಿಗೆ ಅಗ್ನಿಶಾಮಕ ಸಾಧನಗಳನ್ನು ಪೊರೈಸಲು ಉದ್ದೇಶಿಸಲಾಗಿತ್ತು. ಒಂದು ಶಾಲೆಗೆ ತಲಾ ಮೂರು ಅಗ್ನಿಶಾಮಕ ಸಾಧನಗಳನ್ನು ಪೂರೈಸಬೇಕಿತ್ತು. ಪ್ರತಿ ಅಗ್ನಿ ಶಾಮಕ ಸಾಧನವನ್ನು 8,321 ರೂಪಾಯಿ ನೀಡಿ ಖರೀದಿಸಲು ಉದ್ದೇಶಿಸಲಾಗಿತ್ತು.
ಆದರೆ, ಅದನ್ನು ಇ–ಟೆಂಡರ್ ಕರೆಯದೇ ಗುತ್ತಿಗೆ ನೀಡಿದ ಆರೋಪ ಇದೀಗ ಎದುರಾಗಿದೆ. ಈ ಒಪ್ಪಂದ ಸಂಬಂಧಿತ ದಾಖಲೆಯನ್ನು ತಾವಡೆ ಅವರು ವಿಲೇವಾರಿ ಮಾಡಿದ್ದರು. ಆದರೆ ಅದನ್ನು ಹಣಕಾಸು ಇಲಾಖೆ ತಡೆ ಹಿಡಿದಿದೆ.