ಸರ್ಕಾರ ಗಣತಿಯ ಮೂಲಕ ಜನರ ಜಾತಿ ತಿಳಿಯಹೊರಟಿದೆ. ಆದರೆ ಕೆಲವರಿಗೆ ತಮ್ಮ ಜಾತಿ, ಇನ್ನು ಕೆಲವರಿಗೆ ಉಪಜಾತಿಯ ನಿಖರ ಮಾಹಿತಿ ತಿಳಿದಿಲ್ಲ. ಬ್ರಾಹ್ಮಣ ಬಡಗನಾಡು ಸಂಘದ ಸಂಚಾಲಕನಾಗುವ ಹೊಣೆ ನನ್ನ ಅಣ್ಣನ ಮಗನಿಗೆ ಬಂದಿತ್ತು. ‘ನಾವು ಬಡಗನಾಡಲ್ಲ’ ಎಂದು ಹೇಳಿ ತಪ್ಪಿಸಿದೆ. ‘ಹಾಗಾದರೆ ನಾವೇನು?’ ಎಂದ. ನನಗೂ ಸರಿಯಾಗಿ ಗೊತ್ತಿಲ್ಲ. ಆದರೂ ಆತ್ಮವಿಶ್ವಾಸದಿಂದ ‘ಆರುವೇಲು’ ಅಂತಾರಪ್ಪ ಅಂದು ತಪ್ಪಿಸಿಕೊಂಡೆ.
ಸದ್ಯಕ್ಕೆ ನಾನಿರುವುದು, ಹಿಂದೆ ಹರಿಜನಕೇರಿ ಎಂದು ಕರೆಯಲಾಗುತ್ತಿದ್ದ ಬಡಾವಣೆಯಲ್ಲಿ. ನನ್ನಂತೆ ಬೇರೆ-ಬೇರೆ ಜಾತಿಯವರೂ ಇದ್ದಾರೆ. ಇಲ್ಲಿನ ಪದ್ಧತಿ, ಹೆಣ ಬಿದ್ದಾಗ ರಾತ್ರಿ ಜಾಗರಣೆಗೆಂದು ಕಂಸಾಳೆಯವರಿಂದ ಶನಿಮಹಾತ್ಮೆ ಓದಿಸುವುದು; ಹೆಣ ಎತ್ತುವಾಗ ಬಾನಕಿ ಊದುವ, ‘ಗೋವಿಂದ ನಾಮ’ದ ದಾಸಪ್ಪನನ್ನು ಕರೆಸುವುದು. ಮಾದಪ್ಪ, ಚೆಲುವಪ್ಪ, ಈರಭದ್ರ, ಬಂಡಿ ಮಾಂಕಾಳಿ, ಪಳೇಕಮ್ಮ, ಮುಳಕಟ್ಟಮ್ಮ ಎಲ್ಲರೂ ಇವರ ದೇವರೇ. ಕಾಲಂಗಳನ್ನು ತುಂಬಲು ಮೇಡಂಗಳು ಸ್ವಲ್ಪ ಹೆಣಗಿ, ಕೊನೆಗೆ ಯಾವುದಕ್ಕೋ ‘ಟಿಕ್’ ಹೊಡೆದುಕೊಂಡು ಹೋಗುತ್ತಿದ್ದಾರೆ! ಪ್ರತಿನಿತ್ಯ ಮಾಧ್ಯಮಗಳಲ್ಲಿ ಬರುವ ಮನವಿ, ಜಾಹೀರಾತುಗಳನ್ನು ನೋಡಿದರೆ, ಜನರ ‘ಜಾತಿ ನಿರ್ಧಾರ’ಕ್ಕೂ ದಲ್ಲಾಳಿಗಳಿರಬಹುದೇನೋ ಎನಿಸುತ್ತಿದೆ!