ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಮೇಲಿನ ಆದಾಯ ಮೀರಿ ಆಸ್ತಿ ಗಳಿಸಿದ ಪ್ರಕರಣದ ತೀರ್ಪು ಪ್ರಕಟಣೆ ತಡೆ ಹಿಡಿಯುವಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಸೂಚಿಸಬೇಕೆಂದು ಕೋರಿ ವಕೀಲರೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿತು.
ಜಯಲಲಿತಾ ವಿರುದ್ಧದ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯದ ತೀರ್ಪು ಪ್ರಕಟವಾದ ಬಳಿಕ ಕಾನೂನು– ಸುವ್ಯವಸ್ಥೆ ಸಮಸ್ಯೆ ಎದುರಾಗುವ ಸಾಧ್ಯತೆ ಇದ್ದು, ಅದನ್ನು ನಿಯಂತ್ರಿಸಲು ಪೊಲೀಸರಿಗೆ ಕಷ್ಟವಾಗಬಹುದು ಎಂಬ ವಾದವನ್ನು ನ್ಯಾ. ಟಿ.ಎಸ್. ಠಾಕೂರ್ ಅವರ ನೇತೃತ್ವದ ನ್ಯಾಯಪೀಠ ತಳ್ಳಿಹಾಕಿತು.
‘ಮುಖ್ಯಮಂತ್ರಿ ಭದ್ರತೆ ಕುರಿತು ನೀವೇಕೆ ಚಿಂತಿಸುತ್ತೀರಿ. ಅದರ ಬಗ್ಗೆ ತಲೆಕೆಡಿಸಿಕೊಳ್ಳಲು ನೀವ್ಯಾರು? ಈ ಪ್ರಕರಣದಲ್ಲಿ ನಿಮಗಿರುವ ಸಂಬಂಧವೇನು? ಮುಖ್ಯಮಂತ್ರಿ ಭದ್ರತೆ ಕುರಿತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ನ್ಯಾಯಪೀಠ ಹೇಳಿತು. ‘ಮುಖ್ಯಮಂತ್ರಿಗೆ ಅವರ ಭದ್ರತೆ ಕುರಿತು ಆತಂಕಗಳಿದ್ದರೆ ಅವರೇ ಕೋರ್ಟ್ಗೆ ಮನವಿ ಮಾಡಲಿ ಅಥವಾ ತಮಗೆ ಬೆದರಿಕೆ ಇದೆ ಎಂದು ಭಾವಿಸುವವರು ಅರ್ಜಿ ಹಾಕಲಿ’ ಎಂದು ನ್ಯಾಯಪೀಠ ಹೇಳಿತು.’
‘ನಾವು ತಮಿಳುನಾಡು ನಾಗರಿಕರು. ಜಯಲಲಿತಾ ತಮಿಳುನಾಡಿನ ಬಹು ದೊಡ್ಡ ನಾಯಕಿ. ಅವರ ಭದ್ರತೆ ಕುರಿತು ನಮಗೆ ಆತಂಕವಿದೆ. ಹೀಗಾಗಿ ಈ ರಿಟ್ ಅರ್ಜಿ ಸಲ್ಲಿಸಲಾಗಿದೆ. ಈ ಕಾರಣಕ್ಕೆ ತೀರ್ಪು ಪ್ರಕಟಣೆ ಮುಂದೂಡಬೇಕು’ ಎಂದು ಅರ್ಜಿದಾರರು ಮನವಿ ಮಾಡಿದರು.
‘ಕರ್ನಾಟಕ ಹಾಗೂ ತಮಿಳುನಾಡು ನಡುವೆ ಕಾವೇರಿ ನದಿ ನೀರಿನ ವಿವಾದಇರುವುದರಿಂದ ಜಯಲಲಿತಾ ಅವರಿಗೆ ಬೆದರಿಕೆ ಇದೆ’ ಎಂದು ಕೃಷ್ಣಮೂರ್ತಿ ಪರ ವಕೀಲರು ವಾದಿಸಿದರು. ಈ ಹಂತದಲ್ಲಿ ನ್ಯಾಯಪೀಠ ‘ಮುಖ್ಯಮಂತ್ರಿಗೆ ಬೆದರಿಕೆ ಏನಾದರೂ ಬಂದಿದೆಯೇ?’ ಎಂದು ಕೇಳಿತು. ‘ಜಯಲಲಿತಾ ಅವರ ಪರವಾಗಿ ಅರ್ಜಿ ಸಲ್ಲಿಸಲು ನೀವ್ಯಾರೂ ಅಲ್ಲ. ಸಮಸ್ಯೆ ಇದ್ದವರು ಬಂದು ಮನವಿ ಮಾಡಲಿ’ ಎಂದು ತಿಳಿಸಿತು.
ಅರ್ಜಿದಾರರ ವಾದವನ್ನು ನ್ಯಾಯಾಲಯ ತಳ್ಳಿಹಾಕಿತು. ನಿಮ್ಮ ಅರ್ಜಿ ವಿಚಾರಣೆಗೆ ಅಂಗೀಕರಿಸಲು ಯಾವ ಕಾರಣಗಳೂ ಇಲ್ಲದಿರುವುದರಿಂದ ವಜಾ ಮಾಡುವುದಾಗಿ ಹೇಳಿತು. ಆದರೆ, ಅರ್ಜಿದಾರರು ಅರ್ಜಿಯನ್ನು ಹಿಂದಕ್ಕೆ ಪಡೆಯಲು ಅನುಮತಿ ನೀಡುವಂತೆ ಕೋರಿದರು. ನ್ಯಾಯಾಲಯ ಅದಕ್ಕೆ ಅನುಮತಿ ಕೊಟ್ಟು ಅರ್ಜಿಯನ್ನು ಇತ್ಯರ್ಥಪಡಿಸಿತು.
ಜಯಲಲಿತಾ ಮತ್ತು ಅವರ ಗೆಳತಿ ಶಶಿಕಲಾ ಸೇರಿ ನಾಲ್ವರು ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹದಿನೆಂಟು ವರ್ಷ ಕಾನೂನು ಹೋರಾಟದ ಬಳಿಕ ಶನಿವಾರ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ.
ಜಯಲಲಿತಾ 1991ರಿಂದ 1996ರವರೆಗೆ ಮೊದಲ ಸಲ ತಮಿಳುನಾಡು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಆದಾಯ ಮೀರಿ ₨ 66 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣ ಅನೇಕ ರಾಜಕೀಯ ಮತ್ತು ಕಾನೂನು ತಿರುವುಗಳನ್ನು ಪಡೆದುಕೊಂಡಿದೆ. ಜಯಲಲಿತಾ ಅವರ ಒಂದು ಕಾಲದ ದತ್ತು ಪುತ್ರ ಸುಧಾಕರನ್ ಹಾಗೂ ಶಶಿಕಲಾ ಅವರ ಸಂಬಂಧಿ ಇಳವರಸಿ ಈ ಪ್ರಕರಣದ ಉಳಿದ ಇಬ್ಬರು ಆರೋಪಿಗಳಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.