ನವದೆಹಲಿ: ಶಿವಮೊಗ್ಗ ಜಿಲ್ಲೆಯಲ್ಲಿ ‘ಜಮೀನು ಮಂಜೂರಾತಿ ಪ್ರಕರಣ’ ಕುರಿತು ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಅನುಮತಿ ನೀಡಿದ ರಾಜ್ಯ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಬಿಜೆಪಿ ಮುಖಂಡ ಬಿ.ಎಸ್. ಯಡಿಯೂರಪ್ಪ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಸೋಮವಾರ ಹಿಂದಕ್ಕೆ ಪಡೆದರು.
ರಾಜ್ಯ ಹೈಕೋರ್ಟ್ ಅ.21ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ತಮ್ಮ ಕಕ್ಷಿಗಾರರು ಸಲ್ಲಿಸಿರುವ ಎರಡು ವಿಶೇಷ ಮೇಲ್ಮನವಿಗಳನ್ನು ವಾಪಸ್ ಪಡೆಯಲು ಉದ್ದೇಶಿಸಿದ್ದಾರೆ ಎಂದು ಯಡಿಯೂರಪ್ಪನವರ ವಕೀಲರು ಮನವಿ ಮಾಡಿದರು. ವಕೀಲರ ಮನವಿ ಕೇಳಿದ ನ್ಯಾ. ಪಿ.ಸಿ ಘೋಷ್, ಆರ್.ಕೆ. ಅಗರವಾಲ್ ಅವರಿದ್ದ ಪೀಠ, ಅರ್ಜಿ ವಾಪಸ್ ಪಡೆದಿದ್ದಾರೆಂದು ಪರಿಗಣಿಸಿ, ವಜಾ ಮಾಡಿತು.
ಆದರೆ, ಅರ್ಜಿದಾರರು ಎತ್ತಿರುವ ಕಾನೂನು ಸಂಬಂಧಿತ ಪ್ರಶ್ನೆಗಳನ್ನು ನ್ಯಾಯಾಲಯ ಮುಕ್ತವಾಗಿರಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಭೂಸ್ವಾಧೀನ ಅಧಿಸೂಚನೆ ರದ್ದುಪಡಿಸಿದ ಯಡಿಯೂರಪ್ಪ ವಿರುದ್ಧ ದಾಖಲಿಸಲಾಗಿದ್ದ ದೂರನ್ನು ವಜಾ ಮಾಡಿದ್ದ ಲೋಕಾಯುಕ್ತ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಲೋಕಾಯುಕ್ತ ಪೊಲೀಸರ ತನಿಖೆಗೆ ಆದೇಶಿಸಿದೆ. ಲೋಕಾಯುಕ್ತ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಬದಿಗೊತ್ತಿದೆ. ಶಿವಮೊಗ್ಗ ಮೂಲದ ವಕೀಲರೊಬ್ಬರು ಯಡಿಯೂರಪ್ಪ ಮತ್ತು ಅವರ ಪುತ್ರನ ವಿರುದ್ಧ ದೂರು ಸಲ್ಲಿಸಿದ್ದಾರೆ.