ಬರಪೀಡಿತ ಜಿಲ್ಲೆಗಳಾದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಭಾಗದ ರೈತರಿಗೆ ವಾಯುಭಾರ ಕುಸಿತದಿಂದ ಬಿದ್ದ ಮಳೆ ಅಪಾರ ನಷ್ಟ ಉಂಟುಮಾಡಿದೆ. ಕಷ್ಟಪಟ್ಟು ಬೆಳೆದ ರಾಗಿ ಮತ್ತು ಜೋಳ ಸಂಪೂರ್ಣ ನೆಲಕಚ್ಚಿವೆ. ರಾಗಿ ಬೆಳೆ ಕಟಾವಿಗೆ ಬಂದಿತ್ತು. ಅಷ್ಟರಲ್ಲಿ ಯಮನಾಗಿ ಬಂದ ವರುಣ ಅನ್ನದಾತನಿಗೆ ತುಂಬಲಾರದಷ್ಟು ನಷ್ಟ ತಂದೊಡ್ಡಿದ್ದಾನೆ.
ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮತ್ತೊಂದೆಡೆ ರೇಷ್ಮೆ ಕೃಷಿಕನ ಪಾಡು ಹೇಳತೀರದು. ಒಂದು ಮೂಟೆ ಹಿಪ್ಪುನೇರಳೆ ಸೊಪ್ಪಿಗೆ ₹ 400 ಕೊಟ್ಟು ರೇಷ್ಮೆ ಹುಳು ಪೋಷಿಸಿ ರೇಷ್ಮೆ ಗೂಡನ್ನು ಮಾರುಕಟ್ಟೆಗೆ ತಂದರೆ ಅಲ್ಲಿ ಗೂಡಿನ ಬೆಲೆ ಕೆ.ಜಿ.ಗೆ ಕೇವಲ ₹ 80ರಿಂದ 150. ರೇಷ್ಮೆ ಗೂಡಿಗೆ ಸರಿಯಾದ ಬೆಲೆ ಇಲ್ಲ. ರಾಗಿ ಬೆಳೆ ಸಂಪೂರ್ಣ ನಾಶವಾಗಿದೆ. ಸರ್ಕಾರ ಕೂಡಲೇ ಈ ಭಾಗದ ಅನ್ನದಾತನ ನೆರವಿಗೆ ಬರಬೇಕು.