ಬೆಂಗಳೂರು: ‘ನಗರದ ತುರಹಳ್ಳಿ ಗುಡ್ಡ ಮೀಸಲು ಅರಣ್ಯ ಪ್ರದೇಶ ಹಾಗೂ ಬಿ.ಎಂ.ಕಾವಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದವರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಅಂದಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಜಿ.ಅಪ್ಪುರಾವ್ ತನ್ನ ಅಧಿಕಾರ ಬಳಸಿ ಮೊಕದ್ದಮೆಗಳನ್ನು ಮುಕ್ತಾಯಗೊಳಿಸಿ ಪ್ರಕರಣ ಹಿಂದಕ್ಕೆ ಪಡೆದಿದ್ದಾರೆ’ ಎಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್.ಹಿರೇಮಠ ಆರೋಪಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಒತ್ತುವರಿ ಆರೋಪದ ಮೇಲೆ ಆದಿಚುಂಚನಗಿರಿ ಮಠಾಧೀಶರಾಗಿದ್ದ ಬಾಲಗಂಗಾಧರನಾಥಸ್ವಾಮಿ ಮತ್ತು ಅವರ ಆಪ್ತ ಪುಟ್ಟರಾಜು ಅವರ ವಿರುದ್ಧ ಕಗ್ಗಲಿಪುರದ ವಲಯ ಅರಣ್ಯಧಿಕಾರಿ 2006–07ರಲ್ಲಿ ಪ್ರಕರಣ ದಾಖಲಿಸಲಾಗಿತ್ತು’ ಎಂದು ಹೇಳಿದರು.
‘ಕೆಂಗೇರಿ ಹೋಬಳಿಯ ತುರಹಳ್ಳಿ ಗ್ರಾಮದ ಸರ್ವೆ ನಂ. 67 ರಲ್ಲಿ ಸುಮಾರು 5 ರಿಂದ 6 ಎಕರೆ ಹಾಗೂ ಸರ್ವೆ ನಂ. 68 ರಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಆಟದ ಮೈದಾನವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಪ್ರಕರಣವನ್ನು ವಿಚಾರಣೆ ಮಾಡಿ ಕಗ್ಗಲಿಪುರ ವಲಯ ಅರಣ್ಯ ಅಧಿಕಾರಿ ನೀಡಿದ ವರದಿಯ ವಿಚಾರಣಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು 2009 ರಲ್ಲಿ ಡಿಸಿಎಫ್ ಅವರು ಒತ್ತುವರಿ ಆಗಿದ್ದ 7.20 ಎಕರೆ ಅರಣ್ಯ ಭೂಮಿಯನ್ನು ತೆರವುಗೊಳಿಸುವಂತೆ ಬಾಲಗಂಗಾಧರನಾಥಸ್ವಾಮಿ ಹಾಗೂ ಪುಟ್ಟರಾಜು ಅವರಿಗೆ ಸೂಚಿಸಿ ಆದೇಶ ಹೊರಡಿಸಿದ್ದರು.
ಆದರೆ, ಎ.ಜಿ.ಅಪ್ಪುರಾವ್ ಸರ್ಕಾರದ ವಿರುದ್ಧವಾಗಿ ತಮ್ಮ ವ್ಯಾಪ್ತಿಗೂ ಮೀರಿದ ಅಧಿಕಾರವನ್ನು ಬಳಸಿ ಒತ್ತುವರಿದಾರರ ಪರವಾಗಿ ನಿಂತು, ಅರಣ್ಯ ಮೊಕದ್ದಮೆ ಹಿಂದಕ್ಕೆ ಪಡೆದು ಪ್ರಕರಣ ಮುಕ್ತಾಯಗೊಳಿಸಿದ್ದಾರೆ’ ಎಂದು ಆಪಾದಿಸಿದರು. ‘ಇನ್ನೊಂದು ಪ್ರಕರಣದಲ್ಲಿ ಸಯೀದಾ ಅಪೀಫ ತಸ್ಕೀನ್ ಎಂಬುವವರು ಸುಳ್ಳು ದಾಖಲೆಗಳನ್ನು ನೀಡಿ ಕಗ್ಗಲಿಪುರದ ಸರ್ವೆ ನಂ. 59/2 ರಲ್ಲಿ 1.38 ಎಕರೆ ಹಾಗೂ 60/2 ರಲ್ಲಿ ಅರ್ಧ ಎಕರೆ ಅರಣ್ಯ ಪ್ರದೇಶ ಒತ್ತುವರಿ ಮಾಡಿದ್ದರು.
ಅವರ ವಿರುದ್ಧ ವಲಯ ಅರಣ್ಯ ಅಧಿಕಾರಿ 2006–07ರಲ್ಲಿ ಪ್ರಕರಣ ದಾಖಲಿಸಿದ್ದು, ಎ.ಜಿ.ಅಪ್ಪುರಾವ್ ಅವರು 2012 ರಲ್ಲಿ ಪ್ರಕರಣ ಮುಕ್ತಾಯಗೊಳಿಸಿ ಹಿಂದಕ್ಕೆ ಪಡೆದಿದ್ದಾರೆ’ ಎಂದು ಆದೇಶ ಹೊರಡಿಸಿದ್ದಾರೆ ಎಂದು ಹಿರೇಮಠ ದೂರಿದರು. ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಸರ್ಕಾರಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ಖಾಸಗಿ-ಯವರಿಗೆ ಪರಭಾರೆಯಾಗುವಂತೆ ಮಾಡಿರುವ ಹಾಗೂ ಮೊಕದ್ದಮೆ ಹಿಂದಕ್ಕೆ ಪಡೆದಿರುವ ಕುರಿತು ಸಂಪೂರ್ಣ ದಾಖಲೆಗಳನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾದ ಎಸ್.ಶಾಂತಪ್ಪ ಸಿದ್ಧಪಡಿಸಿದ್ದು, ಎ.ಜಿ.ಅಪ್ಪುರಾವ್ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.