ಪಣಜಿ (ಐಎಎನ್ಎಸ್): ಗೋವಾದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ಎಂಜಿಎನ್ಆರ್ಇಜಿಎಸ್) ದಿನಗೂಲಿ ಕಾರ್ಮಿಕರ ಪಟ್ಟಿಯಲ್ಲಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಸಚಿನ್ ತೆಂಡೂಲ್ಕರ್, ಕಪಿಲ್ ದೇವ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಯುವರಾಜ್ ಸಿಂಗ್, ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್, ನಟ ಅಮಿತಾಭ್ ಬಚ್ಚನ್, ಪರೇಶ್ ರಾವಲ್ ಸೇರಿದಂತೆ ಹಲವು ಕೋಟ್ಯಧೀಶರು ಹೆಸರಿವೆ.
ಈ ವಿಷಯ ಕೇಳಿದ ಯಾರಾದರೂ ಆಶ್ಚರ್ಯಪಡುವುದು ಸಹಜ. ಆದರೆ, ಗೋವಾ ಸರ್ಕಾರದ ದಾಖಲೆಗಳನ್ನು ತಿರುವಿ ಹಾಕಿದರೆ ಇದು ನಿಜ ಎಂಬುದು ಗೊತ್ತಾಗುತ್ತದೆ.
ಕ್ರಿಕೆಟ್ನಿಂದ ಪ್ರಖ್ಯಾತರಾದ ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ರತ್ನ ಸಿಕ್ಕಿರಬಹುದು. ಆದರೆ, ಉದ್ಯೋಗ ಖಾತ್ರಿ ದಿನಗೂಲಿ ನೌಕರರ ಪಟ್ಟಿಯಲ್ಲಿ ಅವರ ಹೆಸರೂ ಇದೆ.
ಇನ್ನೊಂದು ವಿಶೇಷವೆಂದರೆ ಫಲಾನುಭವಿಗಳ ಪಟ್ಟಿಯಲ್ಲಿ ಸಚಿನ್ ಅವರ ಪತ್ನಿ ಅಂಜಲಿ, ಪುತ್ರಿ ಸಾರಾ ಮತ್ತು ಮಗ ಅರ್ಜುನ್ ಅವರ ಹೆಸರುಗಳೂ ಇವೆ ಎಂದು ಗೋವಾ ಪರಿವರ್ತನ್ ಮಂಚ್ ಹೆಸರಿನ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಬಹಿರಂಗಪಡಿಸಿದೆ.