ಹುನಗುಂದ (ಬಾಗಲಕೋಟೆ ಜಿಲ್ಲೆ): ತಾಲ್ಲೂಕಿನ ಇಂದವಾರ ಬಳಿ ಬುಧವಾರ ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ ನೀರುಪಾಲಾಗಿದ್ದ ಎಲ್ಲ ಆರು ಜನರ ಶವಗಳು ಗುರುವಾರ ಪತ್ತೆಯಾಗಿವೆ.
ಬುಧವಾರ ಸಂಜೆಯೇ ಶವಗಳಿಗಾಗಿ ಶೋಧ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಗುರುವಾರ ಮುಂಜಾನೆ ಶೋಧ ಕಾರ್ಯಕ್ಕೆ ರಾಯಚೂರಿನ ಈಜು ಪರಿಣಿತರ ತಂಡ ಮತ್ತು ದೋಣಿ ಬಳಸಲಾಗಿದ್ದು, ಎಲ್ಲ ಶವಗಳು ಮಧ್ಯಾಹ್ನದ ಹೊತ್ತಿಗೆ ಪತ್ತೆಯಾದವು.
ಶಾಸಕ ವಿಜಯಾನಂದ ಕಾಶಪ್ಪನವರ ಕೂಡ 2 ತಾಸು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
ಸಚಿವರ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲರು ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರಲ್ಲದೆ, ತಲಾ ₨ 2 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದರು.
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ಒಂದು ಲಕ್ಷ ಮತ್ತು ವೈಯಕ್ತಿಕವಾಗಿ ₨ 50,000ವನ್ನು ಸಚಿವರು ಘೋಷಿಸಿದರೆ, ವಿಜಯಾನಂದ ತಮ್ಮ ಎಸ್ಆರ್ಕೆ ಪ್ರತಿಷ್ಠಾನದಿಂದ ತಲಾ ₨ 50,000 ನಗದು ಕೊಡುವುದಾಗಿ ಸುದ್ದಿಗಾರರಿಗೆ ತಿಳಿಸಿದರು.
ಈ ಭಾಗದಲ್ಲಿ ಜನಸಾಮಾನ್ಯರಿಗೆ ಯಾಂತ್ರಿಕೃತ ದೋಣಿ ಸೌಲಭ್ಯ ಕಲ್ಪಿಸಬೇಕು ಮತ್ತು ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸುವುದಾಗಿ ಸಚಿವರು ತಿಳಿಸಿದರು.