ನವದೆಹಲಿ (ಪಿಟಿಐ): ವಿದೇಶಗಳು ತಮ್ಮ ಬ್ಯಾಂಕುಗಳಲ್ಲಿನ ಭಾರತೀಯ ಖಾತೆದಾರರ ಹೆಸರು ಹಾಗೂ ಠೇವಣಿ ಮಾಹಿತಿಯನ್ನು ತನಗೆ ಒದಗಿಸಬೇಕೆಂದರೆ ತೆರಿಗೆ ವಂಚನೆಯನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ಕಾನೂನು ಜಾರಿಯಾಗಬೇಕು ಎಂದು ಕಪ್ಪುಹಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಸಲಹೆ ನೀಡಿದೆ.
‘ಈಗ ನಮ್ಮ ದೇಶದಲ್ಲಿ ತೆರಿಗೆ ವಂಚನೆ ಹಾಗೂ ವಿದೇಶಿ ವಿನಿಮಯ ಉಲ್ಲಂಘನೆಗಳು ಸಿವಿಲ್ ಅಪರಾಧಗಳಾಗಿವೆ. ಇವನ್ನು ಸಿವಿಲ್ ಅಪರಾಧಗಳೆಂದು ಪರಿಗಣಿಸಿದರೆ ವಿದೇಶಗಳ ಸರ್ಕಾರಗಳು ಅವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹೀಗಾಗಿ ನಮಗೆ ಬೇಕಾದ ಮಾಹಿತಿಗಳನ್ನು ನೀಡಲು ಅವು ಸಹಕಾರ ನೀಡುವುದಿಲ್ಲ’ ಎಂದು ಎಸ್ಐಟಿ ಮುಖ್ಯಸ್ಥ ಎಂ.ಬಿ.ಷಾ ಹೇಳಿದರು.
‘ಈ ಪ್ರಕರಣಗಳನ್ನು ಕ್ರಿಮಿನಲ್ ಅಪರಾಧ ವ್ಯಾಪ್ತಿಯಡಿ ತಂದಿದ್ದೇ ಆದರೆ ವಿದೇಶಗಳು ಸಂಬಂಧಿಸಿದ ಮಾಹಿತಿಗಳನ್ನು ಒದಗಿಸಲೇಬೇಕಾದ ಕಟ್ಟುಪಾಡಿಗೆ ಸಿಲುಕುತ್ತವೆ. ಆಗ, ನಾವು ಅಗತ್ಯ ಮಾಹಿತಿ ಪಡೆಯುವುದು ಸುಲಭವಾಗುತ್ತದೆ’ ಎಂದರು.