ಹೈದರಾಬಾದ್: ಪರಿಶಿಷ್ಟ ಜಾತಿಯವರಿಗೆ ನೀಡುವ ಎಲ್ಲಾ ಸವಲತ್ತುಗಳನ್ನು ದಲಿತ ಕ್ರೈಸ್ತರಿಗೂ ವಿಸ್ತರಿಸಲು ತೆಲಂಗಾಣ ಸರ್ಕಾರ ಆದೇಶಿಸಿದೆ. ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಇದನ್ನು ಪ್ರಕಟಿಸಿದ್ದಾರೆ.
ಇದರಿಂದಾಗಿ ಕೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರು ಮೂರು ಎಕರೆ ಭೂಮಿ, ಶಿಕ್ಷಣ ಶುಲ್ಕ ಮರುಪಾವತಿ ಇನ್ನಿತರ ಸೌಲಭ್ಯಗಳಿಗೆ ಅರ್ಹರಾಗುತ್ತಾರೆ. ‘ರಾಜಕೀಯ ಅಧಿಕಾರಸ್ತರು ದಲಿತರು ಹಾಗೂ ಮತಾಂತರಗೊಂಡ ದಲಿತರ ನಡುವೆ ಏಕೆ ತಾರತಮ್ಯ ಮಾಡುತ್ತಾರೆ ಎಂಬುದೇ ಅರ್ಥವಾಗದು. ನಾವು ತೆಲಂಗಾಣದಲ್ಲಿ ಪರಿಶಿಷ್ಟ ಜಾತಿಯವರಿಗೆ ನೀಡುವ ಪ್ರತಿಯೊಂದು ಸವಲತ್ತನ್ನೂ ದಲಿತ ಕ್ರೈಸ್ತರಿಗೂ ನೀಡಲು ನಿರ್ಧರಿಸಿದ್ದೇವೆ’ ಎಂದು 36ನೇ ಏಕೀಕೃತ ಹೈದರಾಬಾದ್ ಕ್ರಿಸ್ಮಸ್ ಆಚರಣೆ ವೇಳೆ ಹೇಳಿದರು.
ಕ್ರಿಸ್ಮಸ್ ವೇಳೆ ಊರಿಗೆ ತೆರಳುವವರ ಅನುಕೂಲಕ್ಕಾಗಿ ಎರಡು ದಿನಗಳ ರಜೆಯನ್ನು ಪ್ರಕಟಿಸಲಾಗಿದೆ. ಆದರೆ ಡಿ.26ರ ರಜೆಯನ್ನು ಅರ್ಹರ ಆಯ್ಕೆಗೇ ಬಿಡಲಾಗಿದೆ. ಅವರು ಬೇಕೆಂದರೆ ರಜೆ ಪಡೆಯಬಹುದು. ಬೇಕಿಲ್ಲವೆಂದರೆ ಕರ್ತವ್ಯಕ್ಕೆ ಹಾಜರಾಗಬಹುದು.
ಸರ್ಕಾರ ಹಾಗೂ ಕ್ರೈಸ್ತ ಜನಾಂಗದವರ ಸಮನ್ವಯಕ್ಕಾಗಿ ಕೆಲಸ ಮಾಡುವ ಸಲುವಾಗಿ ಕ್ರೈಸ್ತ ಮಂಡಳಿಯನ್ನು ಸ್ಥಾಪಿಸುವುದಾಗಿಯೂ ಹೇಳಿದರು. ನಾಂಪಲ್ಲಿಯಲ್ಲಿರುವ ಹಜ್ ಭವನದ ಮಾದರಿಯಲ್ಲಿ ₨10 ಕೋಟಿ ವೆಚ್ಚದಲ್ಲಿ ಕ್ರೈಸ್ತ ಭವನ ನಿರ್ಮಿಸುವುದಾಗಿ ತಿಳಿಸಿದರು.
ಪರ–ವಿರೋಧ: ತೆಲಂಗಾಣದ ಬಿಜೆಪಿ ಘಟಕವು ಈ ನಿರ್ಧಾರವನ್ನು ಖಂಡಿಸಿದೆ. ಚಂದ್ರಶೇಖರ ರಾವ್ ಅವರ ನಿರ್ಧಾರದಿಂದಾಗಿ ಮತಾಂತರಕ್ಕೆ ದಿಡ್ಡಿಬಾಗಿಲನ್ನು ತೆರೆದಂತೆ ಆಗಿದೆ ಎಂದು ಟೀಕಿಸಿದೆ.