ನವದೆಹಲಿ (ಪಿಟಿಐ): ಕಿರಿಯ ಸಹೋದ್ಯೋಗಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಆರೋಪಿ ತೆಹೆಲ್ಕಾ ಪತ್ರಿಕೆ ಸ್ಥಾಪಕ ಸಂಪಾದಕ ತರುಣ್ ತೇಜ್ಪಾಲ್ ಅವರ ಜಾಮೀನು ಮನವಿ ವಿಚಾರಣೆಗೆ ಸೋಮವಾರ ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ನೇತೃತ್ವದ ಪೀಠ ಗೋವಾ ಪೊಲೀಸರಿಗೆ ಸೂಚಿಸಿದೆ.
ತೇಜ್ಪಾಲ್ ಅವರಿಗೆ ಮಧ್ಯಾಂತರ ಜಾಮೀನು ನೀಡುವಂತೆ ಮನವಿ ಮಾಡಿಕೊಂಡ ಆರೋಪಿ ಪರ ವಕೀಲ ಹರೀಶ್ ಸಾಳ್ವೆ ‘ತೇಜ್ಪಾಲ್ ಗೋವಾವನ್ನು ತೊರೆಯದಂತೆ ಷರತ್ತು ಹಾಕಿ ಜಾಮೀನು ನೀಡಬಹುದು’ ಎಂದು ವಾದಿಸಿದರು.
ಬಾಂಬೆ ಹೈಕೋರ್ಟ್ನ ಗೋವಾ ಪೀಠ ಮಾರ್ಚ್ 14 ರಂದು ತೇಜ್ಪಾಲ್ಗೆ ಜಾಮೀನು ನೀಡಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ತೇಜ್ಪಾಲ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸದ್ಯ ತೇಜ್ಪಾಲ್ ಅವರನ್ನು ಗೋವಾದ ವಾಸ್ಕೋ ನಗರದ ಸದಾ ಉಪಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಕಳೆದ ವರ್ಷ ನವೆಂಬರ್ 30ರಂದು ಅವರನ್ನು ಬಂಧಿಸಲಾಗಿತ್ತು.