ಬೆಂಗಳೂರು: ನಿತ್ಯ ಅಡುಗೆಮನೆಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯದ ಜತೆಗೆ ಇತರೆ ಒಣ ಕಸವನ್ನು ಬಿಬಿಎಂಪಿ ವಾಹನಕ್ಕೆ ನೀಡದೆ ಅಥವಾ ಮನೆಯಿಂದಾಚೆ ರಸ್ತೆಗೆಸೆಯದೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಾಧ್ಯವೇ?
ಇದು ಸಾಧ್ಯ ಎನ್ನುತ್ತಾರೆ ಈ ನಿಟ್ಟಿನಲ್ಲಿ ‘ಶೂನ್ಯ ತ್ಯಾಜ್ಯ ಸಾಗಣೆ’ ಎಂಬ ವಿಭಿನ್ನ ಪರಿಕಲ್ಪನೆಯೊಂದನ್ನು ರೂಪಿಸಿರುವ ಸಂಜಯನಗರದ ನಿವಾಸಿಗಳು.
‘ಸ್ಥಳೀಯ ಆಮ್ಆದ್ಮಿ ಪಕ್ಷದ ಸದಸ್ಯರ ಕಲ್ಪನೆಯ ಕೂಸಾದ ಈ ಯೋಜನೆಗೆ ಸಾರ್ವಜನಿಕರ ಸಹಕಾರದಲ್ಲಿ ಮಹಾತ್ಮಾ ಗಾಂಧೀಜಿಯವರ ಜನ್ಮದಿನವಾದ ಅಕ್ಟೋಬರ್ 2ರಂದು ಸಂಜಯನಗರದಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗುತ್ತದೆ’ ಎನ್ನುತ್ತಾರೆ ರೂವಾರಿಗಳಲ್ಲಿ ಒಬ್ಬರಾದ ವೇಣುಗೋಪಾಲ್ ಅಯ್ಯಂಗಾರ್.
‘ಮಂಡೂರಿನಲ್ಲಿ ತ್ಯಾಜ್ಯ ಸೃಷ್ಟಿಸಿರುವ ನರಕ ಸದೃಶ್ಯ ಚಿತ್ರಣ ಕಂಡಾಗ ಇದನ್ನು ಯಾವ ರೀತಿ ನಿಯಂತ್ರಣ ಮಾಡಬಹುದೆಂದು ಸಮಾನಮನಸ್ಕರ ಜತೆ ಚರ್ಚಿಸಿದಾಗ ಹೊಳೆದದ್ದೆ ಈ ಯೋಜನೆ’ ಎನ್ನುತ್ತಾರೆ ಆಮ್ಆದ್ಮಿ ಪಕ್ಷದ ಸದಸ್ಯರಾದ ವೇಣುಗೋಪಾಲ್.
‘ನಿತ್ಯ ಮನೆಯೊಂದರಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಲ್ಲಿ ಸುಮಾರು ಶೇ 50ಕ್ಕೂ ಅಧಿಕ ಪ್ರಮಾಣದ ಹಸಿ ತ್ಯಾಜ್ಯವಿರುತ್ತದೆ. ಇದನ್ನು ಮಿಕ್ಸಿಗೆ ಹಾಕಿ ದ್ರಾವಣ ಮಾಡಿ, ಮನೆಯ ಮುಂದಿರುವ ಕೈತೋಟ ಅಥವಾ ಉದ್ಯಾನದಲ್ಲಿರುವ ಗಿಡಗಳಿಗೆ ಹಾಕಬಹುದು. ಇಲ್ಲವೆ, ಕೈತೋಟ, ಉದ್ಯಾನ ಇಲ್ಲದವರು ಅಂಗಳದಲ್ಲಿ ಮಣ್ಣಿರುವ ಜಾಗೆಯಲ್ಲಿ ಸಣ್ಣ ಗುಂಡಿ ತೆಗೆದು ಸುರಿಯಬಹುದು. ಇದೂ ಬೇಡ ಎನ್ನುವವರು ತ್ಯಾಜ್ಯ ನೀರಿನ ಜತೆಗೆ ಸುರಿದರಾಯಿತು ತ್ಯಾಜ್ಯ ಸಮಸ್ಯೆ ಅರ್ಧ ಬಗೆಹರಿದಂತೆ’ ಎಂದು ಹೇಳುತ್ತಾರೆ.
‘ಒಣ ತ್ಯಾಜ್ಯದಲ್ಲಿ ಮುಖ್ಯವಾಗಿರುವ ಪೇಪರ್ ಮತ್ತು ಪ್ಲ್ಯಾಸ್ಟಿಕ್ ವಸ್ತುಗಳನ್ನು ಸ್ಥಳೀಯವಾಗಿರುವ ರದ್ದಿ ಪೇಪರ್ ವ್ಯಾಪಾರಸ್ಥರು ಮತ್ತು ಚಿಂದಿ ಆಯುವವರ ಸಹಕಾರದೊಂದಿಗೆ ನಿಯಮಿತವಾಗಿ ಸಂಗ್ರಹಿಸಲಾಗುತ್ತದೆ. ಈ ನಿಟ್ಟಿನಲ್ಲಿ ನಾವು ಕೆಲ ವ್ಯಕ್ತಿಗಳನ್ನು ಗುರ್ತಿಸಿ ಅವರಿಗೆ ಸಮವಸ್ತ್ರ ನೀಡಿ, ತ್ಯಾಜ್ಯ ಸಂಗ್ರಹಿಸುವ ವಿಧಾನವನ್ನು ವಿವರಿಸಿದ್ದೇವೆ. ಸ್ಯಾನಿಟರಿ ಪ್ಯಾಡ್ ಮತ್ತು ಗ್ಲಾಸ್ನಂತಹ ಇತರ ತ್ಯಾಜ್ಯಗಳನ್ನು ಹೇಗೆ ನಿರ್ವಹಿಸಬೇಕು ಎನ್ನುವ ತಂತ್ರಜ್ಞಾನವನ್ನು ಮುಂಬರುವ ದಿನಗಳಲ್ಲಿ ಜಾರಿಗೆ ತರುವ ಚಿಂತನೆ ಇದೆ. ಶೂನ್ಯ ತ್ಯಾಜ್ಯ ಸಾಗಣೆ ಪದ್ದತಿಯನ್ನು ಈಗಾಗಲೇ ನಮ್ಮ ಮನೆಯಲ್ಲಿ ಅಳವಡಿಸಿಕೊಂಡು ಯಶಸ್ಸು ಕಂಡಿದ್ದೇನೆ’ ಎಂದರು ವೇಣುಗೋಪಾಲ್.
‘ನಾವು ಈ ಯೋಜನೆಯನ್ನು ಪ್ರಾಯೋಗಿಕವಾಗಿ ಸಂಜಯನಗರದ 18, 19 ಮತ್ತು 20ನೇ ವಾರ್ಡ್ನಲ್ಲಿ ಜಾರಿಗೆ ತರುತ್ತಿದ್ದೇವೆ. ಇದಕ್ಕೆ ಸ್ಥಳೀಯ ನಾಗರಿಕರು ನೀಡಲು ಮುಂದೆ ಬಂದಿದ್ದಾರೆ. ಈ ಕುರಿತಂತೆ ಸ್ಥಳೀಯ ಪ್ರೌಢಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಛಾಯಾಚಿತ್ರಗಳ ಮೂಲಕ ಅರಿವೂ ಮೂಡಿಸುವ ಕಾರ್ಯಕ್ರಮ ಆಯೋಜಿಸುವ ಚಿಂತನೆ ಇದೆ’ ಎನ್ನುತ್ತಾರೆ ಈ ಯೋಜನೆಯ ಸ್ವಯಂ ಸೇವಕರಲ್ಲಿ ಒಬ್ಬರಾದ ಶಿಕ್ಷಕಿ ಉಷಾ ಸಂಪತ್ಕುಮಾರ್.
‘ಸಂಜಯನಗರದ ತ್ಯಾಜ್ಯ ಸಾಗಣೆ ಕನಿಷ್ಠಮಟ್ಟಕ್ಕೆ ತರಬೇಕೆಂಬ ನಿಟ್ಟಿನಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜತೆಗೆ ನಾಗರಿಕರಲ್ಲಿ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಅರಿವೂ ಮೂಡಿಸುವ ಉದ್ದೇಶ ಇದರ ಹಿಂದಿದೆ. ಈ ಯೋಜನೆಯಲ್ಲಿ ಮೂವತ್ತು ಜನರ ಸ್ವಯಂಸೇವಕರ ತಂಡ ಕಾರ್ಯನಿರ್ವಹಿಸುತ್ತಿದೆ’ ಎನ್ನುತ್ತಾರೆ ವೃತ್ತಿಯಿಂದ ಟೆಕ್ಕಿಯಾಗಿರುವ ಸ್ಥಳೀಯ ನಿವಾಸಿ ವಿಜ್ಞಾನಗೌಡ.
‘ಅಡಾಪ್ಟ್ ಬ್ಲ್ಯಾಕ್ ಸ್ಪಾಟ್’ ಎಂಬ ಮತ್ತೊಂದು ಅಭಿಯಾನದಡಿ ಸಂಜಯನಗರ ಮತ್ತು ಡಾಲರ್ಸ್ ಕಾಲೋನಿಯಲ್ಲಿ ಐದು ತ್ಯಾಜ್ಯ ಸಂಗ್ರಹ ಸ್ಥಳಗಳನ್ನು ಸ್ಥಳೀಯ ಕಾರ್ಯಕರ್ತರು ದತ್ತು ತೆಗೆದುಕೊಂಡು ಅವುಗಳಲ್ಲಿ ಕಸ ಸುರಿಯದಂತೆ ನಿಗಾ ಇಡುತ್ತಿದ್ದಾರೆ. ಜತೆಗೆ, ಸ್ಥಳೀಯ ವ್ಯಾಪಾರಿ ಮಳಿಗೆಗಳಲ್ಲಿ 40 ಮೈಕ್ರಾನ್ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಬಳಕೆ ಮಾಡದಂತೆ ಅರಿವು ಮೂಡಿಸುವ ಕಾರ್ಯಕ್ರಮದ ರೂಪರೇಷೆಯನ್ನು ಸಿದ್ಧಪಡಿಸಲಾಗಿದೆ’ ಎಂದು ಅವರು ತಿಳಿಸಿದರು.
‘ನಮ್ಮ ಕಾರ್ಯಕ್ರಮಗಳಿಗೆ ಬಿಬಿಎಂಪಿ ಉತ್ತಮ ಸಹಕಾರ ನೀಡುತ್ತಿದೆ. ಈ ಯೋಜನೆ ಯಶಸ್ವಿಯಾದರೆ ಇಡೀ ನಗರದಲ್ಲಿ ಜಾರಿಗೊಳಿಸುವ ಯೋಚನೆ ಇದೆ. ಸ್ವಯಂ ಸೇವಕರಾಗಿ ನಮ್ಮೊಂದಿಗೆ ಕೈಜೋಡಿಸಲು ಬಯಸುವ ಆಸಕ್ತರು vignan.n@hotmail.comಗೆ ಮೇಲ್ ಕಳುಹಿಸಬಹುದು’ ಎನ್ನುತ್ತಾರೆ ವಿಜ್ಞಾನಗೌಡ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.